ಬೆಂಗಳೂರು: ಕರೊನಾ ಭೀತಿಯಿಂದ ಇಡೀ ವಿಶ್ವವೇ ನಲುಗುತ್ತಿದೆ. ಈ ಪರಿಸ್ಥಿತಿಯಲ್ಲಿ ಖಾಸಗಿ ಕಂಪನಿ ನೌಕರರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ಗಳು ರ್ಯಾನ್ಸಮ್ವೇರ್ ದಾಳಿ ನಡೆಸುತ್ತಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ವಕೀಲರೊಬ್ಬರ ಕಂಪ್ಯೂಟರ್ ಹ್ಯಾಕ್ ಮಾಡಿ ದತ್ತಾಂಶ ಕದ್ದಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕಂಪನಿಯ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದ್ದ ವೇಳೆ ಕಂಪ್ಯೂಟರ್ ಹ್ಯಾಕ್ ಆಗಿವೆ. 500ಕ್ಕೂ ಹೆಚ್ಚು ಗ್ರಾಹಕರ ಲೆಕ್ಕ ಪರಿಶೋಧಕ ದತ್ತಾಂಶವನ್ನು ಹ್ಯಾಕರ್ಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಬಿಟ್ಕಾಯಿನ್ಗೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಹ್ಯಾಕರ್ಸ್ ಸುಳಿಗೆ ಸಿಲುಕಿರುವ ವಕೀಲರೊಬ್ಬರು, ಪಶ್ಚಿಮ ವಿಭಾಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್, ಆದ್ರೆ ಮತ್ತೊಂದು ಬೆಡ್ರೂಮ್ಗೇ ನುಗ್ಗಿತ್ತು..
ಗಾಂಧಿನಗರದ ನಿವಾಸಿ ವಕೀಲ ಬಾಬುಲಾಲ್ ಎಂಬುವರು ತೆರಿಗೆ ಸಲಹೆಗಾರರಾಗಿದ್ದು, ಕನ್ಸಲ್ಟೆನ್ಸಿ ತೆರೆದಿದ್ದಾರೆ. 500ಕ್ಕೂ ಹೆಚ್ಚು ಗ್ರಾಹಕರಿಗೆ ಲೆಕ್ಕ ಪರಿಶೋಧಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಕಚೇರಿಯನ್ನು ಬಂದ್ ಮಾಡಿದ್ದರು.ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಏ. 3ರಂದು ಕಚೇರಿ ಬಾಗಿಲು ತೆರೆದು ಪರಿಶೀಲಿಸಿದಾಗ, ಕಂಪ್ಯೂಟರ್ ವರ್ಕ್ ಆಗಿಲ್ಲ. ಬಹುದಿನಗಳ ನಂತರ ಆರಂಭಿಸುತ್ತಿರುವುದರಿಂದ ಹೀಗಾಗಿರಬಹುದು ಎಂದು ತಿಳಿದು ಸುಮ್ಮನಾಗಿದ್ದಾರೆ. ಇದಾದ ಎರಡು ದಿನಗಳ ನಂತರ ತಂತ್ರಜ್ಞರನ್ನು ಕರೆಸಿ ಪರಿಶೀಲಿಸಿದಾಗ, ಸೈಬರ್ ದಾಳಿ ನಡೆದಿರುವುದು ಕಂಡುಬಂದಿದೆ.
ಕಚೇರಿಯಲ್ಲಿನ 2 ಕಂಪ್ಯೂಟರ್ ಹಾಗೂ ಡೇಟಾ ಸಂಗ್ರಹಿಸಿದ್ದ ಹಾರ್ಡ್ ಡಿಸ್ಕ್ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಕಂಪ್ಯೂಟರ್ನ ಡೆಸ್ಕ್ಟಾಪ್ನಲ್ಲಿ, ‘ನಿಮ್ಮ ಎಲ್ಲ ಕಡತಗಳನ್ನು ಸ್ವಾಮ್ಯಕ್ಕೆ ತೆಗೆದುಕೊಂಡಿದ್ದೇವೆ. ಅದನ್ನು ಹಿಂಪಡೆಯಲು ನಮ್ಮನ್ನು ಸಂಪರ್ಕಿಸಿ’ ಎಂದು ಇಮೇಲ್ ವಿಳಾಸ ನಮೂದಿಸಿ ಸಂದೇಶ ಹಾಕಿದ್ದಾರೆ. ರ್ಯಾನ್ಸಮ್ವೇರ್ ದಾಳಿ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ದೂರಿನ ಅನ್ವಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
ಹ್ಯಾಕರ್ಗಳು ಇಮೇಲ್ ಮೂಲಕ ರ್ಯಾನ್ಸಮ್ವೇರ್ ಲಿಂಕ್ ಕಳುಹಿಸುತ್ತಾರೆ. ಕಂಪ್ಯೂಟರ್ನಲ್ಲಿ ಆ್ಯಂಟಿ ವೈರಸ್ ಸ್ಟಾವೇರ್ ಅಳವಡಿಸಿಕೊಳ್ಳದಿದ್ದರೆ ಹಾಗೂ ಪೈರಸಿ ಒಎಸ್ (ಆಪರೇಟಿಂಗ್ ಸಿಸ್ಟಮ್) ಬಳಸುತ್ತಿದ್ದರೆ ಕಂಪ್ಯೂಟರ್ ಹ್ಯಾಕ್ ಆಗುತ್ತದೆ. ಕಂಪನಿಯ ವ್ಯವಹಾರದ ಗಣಕೀಕೃತ ವ್ಯವಸ್ಥೆಯನ್ನು ಸೈಬರ್ ಖದೀಮರು ತಮ್ಮ ಸ್ವಾಮ್ಯಕ್ಕೆ ತೆಗೆದುಕೊಂಡು, ದತ್ತಾಂಶವನ್ನು ವಶದಲ್ಲಿಟ್ಟುಕೊಳ್ಳುತ್ತಾರೆ. ಇದನ್ನು ಒತ್ತೆ ಇಟ್ಟುಕೊಂಡು ದುಡ್ಡು ಸುಲಿಗೆ ಮಾಡುವುದೇ ಹ್ಯಾಕರ್ಸ್ಗಳ ಉದ್ದೇಶ. ಬಿಟ್ ಕಾಯಿನ್ಗಳ ರೂಪದಲ್ಲಿ ಹಣ ಪಡೆಯುತ್ತಾರೆ. ಈ ಪ್ರಕರಣದಲ್ಲಿ ಕಂಪ್ಯೂಟರ್ನ ಡೆಸ್ಕ್ ಟಾಪ್ ಮೇಲೆ ಇಮೇಲ್ ಐಡಿ ಹರಿಯಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಒಸಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕ್ ಸೇನೆ ಮೇಲೆ ಪ್ರತಿದಾಳಿ: ಕನಿಷ್ಠ ಮೂರು ಪಾಕ್ ಸೈನಿಕರ ಹತ್ಯೆ