ಉಳ್ಳಾಲ: ಬೋಳಿಯಾರ್ ಗ್ರಾಮದ ಮನೆಯೊಂದಕ್ಕೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದು, ಮನೆ ಮಂದಿ ದಿಗ್ಬಂಧನಕ್ಕೊಳಗಾಗಿ, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು. ಪಂಚಾಯಿತಿ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿ ವಾಮಾಚಾರಕ್ಕೆ ಬಳಸಲಾದ ವಸ್ತುಗಳನ್ನು ತೆರವುಗೊಳಿಸಿದರು.
ಪಾವೂರು ಇನೋಳಿ ಬಿ.ಸೈಟ್ ನಿವಾಸಿ ಅಬ್ದುಲ್ ಸಲಾಂ ಎಂಬುವರ ಬೋಳಿಯಾರ್ ಗ್ರಾಮದ ಅಮ್ಮೆಂಬಳದಲ್ಲಿರುವ ಮನೆಯಲ್ಲಿ ಪ್ರಕರಣ ನಡೆದಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಲಾಂ ಮನೆಯಲ್ಲಿ ಪತ್ನಿ, ಐವರು ಮಕ್ಕಳು, ತಾಯಿ, ಅತ್ತೆ ಮತ್ತು ಭಾವ ಇದ್ದು, ಮಂಗಳವಾರ ರಾತ್ರಿ 11.30ರ ಬಳಿಕ ನಿದ್ದೆ ಮಾಡಿದ್ದರು.
ಬುಧವಾರ ಬೆಳಗ್ಗೆ ಸಲಾಂ ಅವರ ಪತ್ನಿ ಶಾಯಿದಾ ಬಾನು ಮನೆಯ ಬಾಗಿಲು ತೆರೆದಾಗ ಮೆಟ್ಟಿಲಿನಲ್ಲಿ ಸಿಯಾಳ, ತೆಂಗಿನಕಾಯಿ ಎರಡು ತುಂಡುಗಳು, ತುಂಡರಿಸಿದ ಲಿಂಬೆ ಹಣ್ಣು, ಸುಟ್ಟ ತೆಂಗಿನ ಗರಿಯ ಕೋಲಿಗೆ ಕುಂಕುಮ ಹಾಕಿ ಜಗಲಿಯಲ್ಲಿಟ್ಟಿರುವುದು ಕಂಡುಬಂದಿದೆ. ಅಡುಗೆ ಕೋಣೆಯ ಬಾಗಿಲಲ್ಲೂ ವಾಮಾಚಾರದ ಕುರುಹುಗಳು ಕಂಡು ಬಂದಿದೆ.
ಬೋಳಿಯಾರ್ ಗ್ರಾಪಂ ಅಧ್ಯಕ್ಷ ಸತೀಶ್ ಆಚಾರ್ಯ, ಸದಸ್ಯ ರೋಹಿನಾಥ್ ಶೆಟ್ಟಿ, ಮಾಜಿ ಸದಸ್ಯ ವಿನ್ಸೆಂಟ್ ಡಿಸೋಜ ಧರ್ಮತೋಟ, ಬಿಲ್ಲವ ಮುಖಂಡ ಸುಭಾಷ್ ಧರ್ಮನಗರ ಮೊದಲಾದವರು ಸ್ಥಳಕ್ಕಾಗಮಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು. ಕೊಣಾಜೆ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ ಬಳಿಕ ವಾಮಾಚಾರಕ್ಕೆ ಬಳಸಲಾಗಿದ್ದ ವಸ್ತುಗಳನ್ನು ತೆರವುಗೊಳಿಸಲಾಯಿತು.