ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿಭಿನ್ನ ತತ್ವ ಸಿದ್ಧಾಂತಗಳನ್ನು ಹೊಂದಿದ ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸಿದರೆ ಅದು ತುಂಬಾ ದಿನ ಉಳಿಯುವುದಿಲ್ಲ ಎಂಬ ರಾಜಕೀಯ ಪಂಡಿತರ ಮಾತಿನಂತೆಯೇ ಮಹಾರಾಷ್ಟ್ರ ಶಿವಸೇನಾ-ಎಸ್ಸಿಪಿ-ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಸಿಎಂ ಸ್ಥಾನಕ್ಕಾಗಿ ಒಳಗೊಳಗೆ ಮಸಲತ್ತುಗಳು ನಡೆಯುತ್ತಿರುವ ಮಧ್ಯೆಯೇ ಭೀಮಾ ಕೋರೇಗಾಂವ್ ಪ್ರಕರಣ ತನಿಖಾ ವಿಚಾರ ಮೈತ್ರಿಕೂಟದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ. ಈ ಪ್ರಕರಣವನ್ನು ಸಿಎಂ ಉದ್ಧವ್ ಠಾಕ್ರೆ ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ ಒಪ್ಪಿಸಿದ್ದು, ಈ ಸಂಬಂಧ ಈಗಾಗಲೇ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಠಾಕ್ರೆ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಇದೀಗ ಆ ಸಾಲಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸೇರಿಕೊಂಡಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖರ್ಗೆ, ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಿರುವುದು ಸರಿಯಲ್ಲ. ನಾವೆಲ್ಲ ಸರ್ಕಾರದಲ್ಲಿ ಪಾಲದಾರರು. ಇಂತಹ ವಿಚಾರಗಳನ್ನು ನಮ್ಮೊಂದಿಗೆ ಚರ್ಚಿಸಬೇಕು. ನೀವು (ಉದ್ಧವ್ ಠಾಕ್ರೆ) ಅಧಿಕಾರವನ್ನು ಹೊಂದಿರಬಹುದು ಆದರೆ, ಅದನ್ನು ನ್ಯಾಯಯುತವಾಗಿ ಬಳಸಬೇಕು. ಅಲ್ಲಿ ನಮ್ಮ ಸಚಿವರುಗಳು ಕೂಡ ಇದ್ದಾರೆ. ಅವರು ಹೋರಾಡುತ್ತಾರೆ ಎಂದು ಮಹಾರಾಷ್ಟ್ರ ಉಸ್ತುವಾರಿ ಖರ್ಗೆ ಹೇಳಿದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಖಂಡಿಸಿದ ದಿನದ ಬೆನ್ನಲ್ಲೇ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಮೈತ್ರಿ ಪಕ್ಷಗಳ ಜತೆ ಚರ್ಚಿಸದೇ ಭೀಮಾ ಕೋರೇಗಾಂವ್ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಿದ ನಿರ್ಧಾರ ಸರಿಯಲ್ಲ ಎಂದು ಶರದ್ ಪವಾರ್ ಅಸಮಾಧಾನ ಹೊರಹಾಕಿದ್ದರು.
ಕಾನೂನು ಸುವ್ಯವಸ್ಥೆ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದು, ರಾಜ್ಯದ ಹಕ್ಕುಗಳ ಮೇಲೆ ಆಕ್ರಮಣ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರವು ಕೂಡ ಬೆಂಬಲ ನೀಡಿದ್ದು ಸರಿ ಹೊಂದಲ್ಲ ಎಂದು ಪವಾರ್ ಪ್ರತಿಕ್ರಿಯೆ ನೀಡಿದ್ದರು. (ಏಜೆನ್ಸೀಸ್)