ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾತ್ರವಲ್ಲದೇ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪ್ರತಿಮೆಗೂ ಗೌರವ ಸಲ್ಲಿಸಿದ್ದಾರೆ ಎಂದು ಅಡಿಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಫೋಟೋ ಹಿಂದಿನ ಅಸಲಿಯತ್ತನ್ನು ಫ್ಯಾಕ್ಟ್ಚೆಕ್ ಬಯಲಿಗೆ ಎಳೆದಿದೆ.
ಪರ್ವೇಜಲಾಮ್ ಖಾನ್ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಗಾಂಧಿ ಪ್ರತಿಮೆಯ ಜತೆಗೆ ಮತ್ತೊಂದು ಪ್ರತಿಮೆಗೆ ಪ್ರಧಾನಿ ನಮಿಸುತ್ತಿರುವ ಫೋಟೋವನ್ನು ಒಟ್ಟಿಗೆ ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಫೋಟೋ ಕುರಿತು ಪ್ರಧಾನಿ ಮೋದಿ, ಗಾಂಧಿ ಮತ್ತು ಹಂತಕ ಗೋಡ್ಸೆಗೆ ಪ್ರತಿಮೆಗೆ ನಮಸ್ಕರಿಸುತ್ತಿದ್ದಾರೆ ಎಂದು ಬರೆದು ವೈರಲ್ ಮಾಡಲಾಗಿದೆ. ಅಲ್ಲದೆ, ಈ ಪೋಸ್ಟ್ 3 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಕೂಡ ಮಾಡಿಕೊಂಡಿದ್ದಾರೆ.
ಆದರೆ, ಸತ್ಯಾಂಶ ಏನೆಂಬುದನ್ನು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಅಸಲಿಗೆ ಪ್ರಧಾನಿ ಮೋದಿ ಅವರು ಗೋಡ್ಸೆ ಪ್ರತಿಮೆಗೆ ಗೌರವವನ್ನೇ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಬದಲಾಗಿ ಭಾರತೀಯ ಜನಸಂಘದ ಮಾಜಿ ನಾಯಕ ಹಾಗೂ ಆರ್ಎಸ್ಎಸ್ ಆದರ್ಶವಾದಿ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. ಇದೇ ಫೋಟೋವನ್ನು ಗೋಡ್ಸೆ ಎಂದು ಗಾಂಧಿ ಫೋಟೋ ಜತೆಗೆ ಎಡಿಟ್ ಮಾಡಿ ತಪ್ಪು ಸಂದೇಶವನ್ನು ಹರಡಿಸಲಾಗಿದೆ.
ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಇಂಜಿನ್ಗೆ ಹಾಕಿ ನೋಡಿದಾಗ ಫೋಟೋ ಕುರಿತ ನಿಖರ ಮಾಹಿತಿ ಪತ್ತೆಯಾಗಿದೆ. ಇಂಟರ್ನ್ಯಾಶನಲ್ ಬಿಸಿನೆಸ್ ಟೈಮ್ಸ್ ಲೇಖನದಲ್ಲಿ ಎರಡನೇ ಫೋಟೋವನ್ನು ಬಳಸಲಾಗಿದೆ. ಅದರಲ್ಲಿ ಕಪ್ಪು ಬಣ್ಣದ ಪ್ರತಿಮೆಗೆ ಪ್ರಧಾನಿ ಮೋದಿ ನಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಇನ್ನಿತರ ಬಿಜೆಪಿ ನಾಯಕರೊಂದಿಗೆ 2017 ಏಪ್ರಿಲ್ 6ರಂದು ದೀನ ದಯಾಳ್ ಉಪಾಧ್ಯಾಯ ಪ್ರತಿಮೆಗೆ ಗೌರವ ಸಲ್ಲಿಸಿದರು. ನವದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ನಡೆದ 37ನೇ ಪಕ್ಷ ಸಂಸ್ಥಾಪನ ದಿನದಂದು ಫೋಟೋವನ್ನು ತೆಗೆಯಲಾಗಿದೆ ಎಂದು ಲೇಖನದಲ್ಲಿ ಅಡಿಬರಹ ನೀಡಲಾಗಿದೆ.
ಇನ್ನು ಗಾಂಧಿ ಪ್ರತಿಮೆಗೆ ನಮಸ್ಕರಿಸುತ್ತಿರುವ ಫೋಟೋವನ್ನು ರಾಜ್ಕೋಟ್ನಲ್ಲಿ ತೆಗೆಯಲಾಗಿದೆ. 2018 ಸೆಪ್ಟೆಂಬರ್ 30ರಂದು ರಾಜ್ಕೋಟ್ನಲ್ಲಿನ ಮಹಾತ್ಮ ಗಾಂಧಿ ಮ್ಯೂಸಿಯಂಗೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಫೋಟೋ ಕ್ಲಿಕ್ಕಿಸಲಾಗಿದೆ.
ಇದೇ ಮೊದಲೇನಲ್ಲ ಕಳೆದ ವರ್ಷ ಮಾರ್ಚ್ ತಿಂಗಳಲ್ಲೂ ಇದೇ ರೀತಿಯಾದ ಫೋಟೋವನ್ನು ತಪ್ಪು ಸಂದೇಶ ಹರಡಿಸುವ ಹುನ್ನಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪ್ರಯತ್ನ ಮುಂದುವರಿದಿದೆ. (ಏಜೆನ್ಸೀಸ್)