ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಮಿನಿ ಕ್ರೀಡಾ ಸಮುಚ್ಚಯ ನಿರ್ವಿುಸುವ ಉದ್ದೇಶವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ವಿುಸಿದ ಈಜುಗೊಳ, ಸ್ಮಾರ್ಟ್ಹೆಲ್ತ್, ಸ್ಮಾರ್ಟ್ಸ್ಕೂಲ್ ಯೋಜನೆಗಳ ಉದ್ಘಾಟನೆ ಹಾಗೂ ನೂತನ ಯೋಜನೆಗಳಾದ ಬೆಂಗೇರಿ ಮತ್ತು ಉಣಕಲ್ಲ ಸಂತೆ ಮಾರುಕಟ್ಟೆ ನಿರ್ವಣ, ಬಹುವಾಹನ ನಿಲುಗಡೆ ಯೋಜನೆ, ಸ್ಮಾರ್ಟ್ ರಸ್ತೆ ಕಾಮಗಾರಿ ಪ್ಯಾಕೇಜ್ 5, 6, ಪುಟಾಣಿ ರೈಲು ಯೋಜನೆಗಳಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
2024ರ ಒಲಿಂಪಿಕ್ಸ್ನಲ್ಲಿ ಭಾರತ ಪದಕ ಗೆಲ್ಲುವ ಪಟ್ಟಿಯಲ್ಲಿ ಎರಡಂಕಿ ದಾಟಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು. ಈ ಹಿನ್ನೆಲೆಯಲ್ಲಿ ಕ್ರೀಡೆಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಹುಬ್ಬಳ್ಳಿಯಲ್ಲಿ 100 ಕೋಟಿ ರೂ. ವೆಚ್ಚದ ಹಾಗೂ ಧಾರವಾಡದಲ್ಲಿ 30 ಕೋಟಿ ರೂ. ವೆಚ್ಚದ ಕ್ರೀಡಾ ಸಮುಚ್ಚಯ ನಿರ್ವಣಗೊಳ್ಳಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಹಿಂದಿನ ಸರ್ಕಾರ ತಡೆಹಿಡಿದಿದ್ದ ಅವಳಿ ನಗರದ ರಸ್ತೆ ನಿರ್ವಣದ ಯೋಜನೆಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ ಎಂದರು.
ಧಾರವಾಡ ಜಿಲ್ಲಾದ್ಯಂತ ಅಭಿವೃದ್ಧಿಪರ್ವ ಪ್ರಾರಂಭಗೊಂಡಿದೆ. ಪ್ರತಿ ಹಳ್ಳಿಗೆ ಕುಡಿಯುವ ನೀರಿನ ಯೋಜನೆ, ನೀರಾವರಿ ಯೋಜನೆ ಜತೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಹು-ಧಾ ಸ್ಮಾರ್ಟ್ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್, ಮಾಜಿ ಮೇಯರ್ಗಳಾದ ಸುಧೀರ ಸರಾಫ, ಡಿ.ಕೆ. ಚವ್ಹಾಣ, ವೀರಣ್ಣ ಸವಡಿ, ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಉಮೇಶ ಕೌಜಗೇರಿ, ಶಿವು ಮೆಣಸಿನಕಾಯಿ, ಮಹೇಶ ಬುರ್ಲಿ, ಲಕ್ಷ್ಮಣ ಗಂಡಗಾಳೇಕರ, ಉಮೇಶ ಕೌಜಗೇರಿ, ರಾಜಣ್ಣ ಕೊರವಿ ಮತ್ತಿತರರಿದ್ದರು.
ಅವಳಿ ನಗರದ ಎಲ್ಲೆಡೆ ಸಿಆರ್ಎಫ್ ಅನುದಾನದಲ್ಲಿ ರಸ್ತೆ ನಿರ್ವಿುಸಲಾಗಿದೆ. ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ರಸ್ತೆಗಳನ್ನು ಧೂಳುಮುಕ್ತ ಮಾಡುವ ಹಾಗೂ ಕಸ ತೆಗೆದು ಮಹಾನಗರವನ್ನು ಸುಂದರಗೊಳಿಸುವ ಕೆಲಸವನ್ನಾದರೂ ಪಾಲಿಕೆ ಮಾಡಲಿ.
– ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಫೆ. 14ರಂದು ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಭೆ ನಡೆಯಲಿದೆ. ಈಗಾಗಲೇ ಮುಂಬೈನಲ್ಲಿ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಲಾಗಿದೆ. ಹೈದರಾಬಾದ್ನ ಉದ್ಯಮಿಗಳನ್ನು ಆಹ್ವಾನಿಸಲಾಗುವುದು. ಈ ಹಿನ್ನೆಲೆಯಲ್ಲಿ ಜ. 29ರಂದು ಹೈದರಾಬಾದ್ನಲ್ಲಿ ರೋಡ್ ಶೋ ನಡೆಸಲಾಗುವುದು.
– ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ