ಎನ್.ಆರ್.ಪುರ: ಡಾ. ಬಿ.ಆರ್.ಅಂಬೇಡ್ಕರ್ ಬಡವರ, ಶೋಷಿತರ ಪರ ಗಟ್ಟಿ ಧ್ವನಿಯಾಗಿದ್ದರು. ಅನ್ಯಾಯದ ವಿರುದ್ಧ ಸಿಡಿದೇಳುವ ವ್ಯಕ್ತಿತ್ವ ಅವರಲ್ಲಿತ್ತು ಎಂದು ದಲಿತ ಮುಖಂಡ ಶೆಟ್ಟಿಕೊಪ್ಪ ಮಹೇಶ್ ಹೇಳಿದರು.
ಭಾನುವಾರ ತಾಲೂಕಿನ ಶೆಟ್ಟಿಕೊಪ್ಪ ಸಮೀಪದ ಜನತಾ ಕಾಲನಿಯಲ್ಲಿ ಪಿ.ಮಂಜುನಾಥ್ ಎಂಬುವರ ಮನೆಯಂಗಳದಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ನಾಯಕರಲ್ಲ. ಅವರು ಎಲ್ಲ ಜನಾಂಗದವರಿಗೂ ನಾಯಕ. ಅವರು ವಿಶ್ವ ಚೇತನರಾಗಿದ್ದು ಸಂವಿಧಾನದಿಂದ ಸರ್ವ ಜನಾಂಗಕ್ಕೂ ಸಮಬಾಳು, ಸಮಪಾಲು ಸಿಕ್ಕಿದೆ. ಸಂವಿಧಾನವೇ ಎಲ್ಲ ಧರ್ಮಗಳನ್ನು ರಕ್ಷಿಸುತ್ತಿದೆ. ಸಂವಿಧಾನ ಎಂಬುದು ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಖುರಾನ್ ಹಾಗೂ ಕ್ರಿಶ್ಚಿಯನ್ರಿಗೆ ಬೈಬಲ್ ಇದ್ದಂತೆ ಎಂದರು.
ಶೆಟ್ಟಿಕೊಪ್ಪದ ಮುಖಂಡ ಎ.ಬಿ.ಮಂಜುನಾಥ್ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ. ಅಂಬೇಡ್ಕರ್ ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದರು.
ಮುಖಂಡರಾದ ಭೀಮನರಿ ಪ್ರಶಾಂತ್, ಅಬ್ದುಲ್ ರೆಹಮಾನ್, ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್, ದೀಪು, ಚಂದ್ರಶೇಖರ್, ಪಲ್ಲವಿ ಮಂಜುನಾಥ್ ಮತ್ತಿತರರಿದ್ದರು.