ಕೊಪ್ಪ: ತಾಲೂಕಿನ ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇರುಕೊಡಿಗೆಯ ಬ್ರಹ್ಮವನದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ೆ.26ರಂದು ಅಶ್ವತ್ಥೋಪನಯನ, ಅಶ್ವತ್ಥ ವಿವಾಹ ಮತ್ತು ಗಿರಿಜಾಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ನುಗ್ಗಿ ಮಂಜುನಾಥ್ ತಿಳಿಸಿದರು.
ಹೇಳಿಕೆ ನೀಡಿರುವ ಅವರು, ಸುಮಾರು 200 ವರ್ಷಗಳ ಇತಿಹಾಸ ಇರುವ ಸೋಮೇಶ್ವರ ದೇವಸ್ಥಾನವು ಶಿಥಿಲಗೊಂಡಿತ್ತು. 2010ರಲ್ಲಿ ಊರಿನವರ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ. ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀಗಳು ಕುಂಭಾಭಿಷೇಕ ನೆರವೇರಿಸಿದ್ದರು. ವೇದಬ್ರಹ್ಮ ನಾಗೇಂದ್ರ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದವು ಎಂದು ಹೇಳಿದ್ದಾರೆ. ಜೀಣೋದ್ಧಾರ ಸಂದರ್ಭ ದೇವಸ್ಥಾನದ ಆವರಣದಲ್ಲಿ ಬೇವಿನ ಗಿಡ ಮತ್ತು ಅಶ್ವತ್ಥ ಗಿಡಗಳನ್ನು ನೆಡಲಾಗಿತ್ತು. ಈಗ ಎರಡೂ ಮರಗಳ ಉಪನಯನ ಮತ್ತು ವಿವಾಹ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ಊರಿನಲ್ಲಿ ನಡೆಯುತ್ತಿರುವುದು ಇದೇ ಮೊದಲು. ಆದ್ದರಿಂದ ನುಗ್ಗಿ ಹಾಗೂ ಬಿಂತ್ರವಳ್ಳಿ ಗ್ರಾಮದ ಮಹಿಳೆಯರನ್ನು ಆಹ್ವಾನಿಸಲಾಗಿದೆ. ಊರಿಗೆ ಶ್ರೇಯಸ್ಸಿಗಾಗಿ ಗಿರಿಜಾಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.