ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯಾದ ಈ ವರ್ಷದ ಗಣರಾಜ್ಯೋತ್ಸವ ವಿಶೇಷವಾಗಿದೆ ಎಂದು ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ನವೀನ ಪಾರ್ಕ್ ನಿವಾಸಿಗಳ ಸಂಘದ ಚೇರ್ಮನ್ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ನವೀನ ಪಾರ್ಕ್ನ ಕಮ್ಯುನಿಟಿ ಹಾಲ್ನಲ್ಲಿ ಶುಕ್ರವಾರದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲು ಕಾರಣರಾದವರಿಗೆ ಅಭಿನಂದನೆ ಸಲ್ಲಿಸಿದರು.
ಭಾರತ ವಿಶ್ವದ ಸೂಪರ್ ಪವರ್ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಶೀಘ್ರ ಮೊದಲ ಸ್ಥಾನಕ್ಕೆ ಏರಲಿದೆ. ದೇಶದ ಪ್ರತಿಯೊಬ್ಬರೂ ಒಗ್ಗಟ್ಟು ಪಾಲಿಸಬೇಕು. ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳಬೇಕು. ಆ ಮೂಲಕ ಭಾರತ ವಿಶ್ವಗುರು ಆಗಲು ಕಂಕಣಬದ್ಧರಾಗಬೇಕು ಎಂದು ತಿಳಿಸಿದರು.
ದೆಹಲಿಯಲ್ಲಿ ಆಯೋಜಿಸಿದ್ದ ಗಣರಾಜೋತ್ಸವ ಸಮಾರಂಭಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಆಮಂತ್ರಿತರಾಗಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಸಾಧನೆಯ ಬ್ರೖೆನ್ ಲಿಪಿ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಿರುವುದು ರಾಜ್ಯದ ಜನರಿಗೆ ಅಭಿಮಾನದ ಸಂಗತಿ ಎಂದು ಬಣ್ಣಿಸಿದರು.
ಅತಿಥಿಯಾಗಿದ್ದ ಡಿಸಿಪಿ ರವೀಶ ಮಾತನಾಡಿ, ಕಷ್ಟಗಳಲ್ಲಿ ಸಹಾಯ ಮಾಡುವ ಒಬ್ಬ ವ್ಯಕ್ತಿ ಇದ್ದಾನೆಂಬ ವಿಶ್ವಾಸವನ್ನು ಸರ್ಕಾರಿ ಅಧಿಕಾರಿಗಳು ನಾಗರಿಕರಲ್ಲಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಮಾಜಿ ಚೇರ್ಮನ್ ಎನ್.ಎ. ಚರಂತಿಮಠ, ಉಪಾಧ್ಯಕ್ಷ ಅರವಿಂದ ಕಲಬುರ್ಗಿ, ಕಾರ್ಯದರ್ಶಿ ವೈದ್ಯನಾಥನ್, ನವೀನ್ ಪಾರ್ಕ್ ಹಾಗೂ ಸುತ್ತಲಿನ ಬಡಾವಣೆಗಳ ನಿವಾಸಿಗಳು ಹಾಜರಿದ್ದರು.