ಔರಾದ್: ಶಾಲೆಗಳಲ್ಲಿ ಮಕ್ಕಳಿಗೆ ಕಾನೂನು ಸಾಕ್ಷರತೆ ಬಗ್ಗೆ ಅರಿವು ಮೂಡಿಸಿದರೆ ಅಪರಾಧಗಳಿಗೆ ಪ್ರಾಥಮಿಕ ಹಂತದಲ್ಲಿ ಕಡಿವಾಣ ಹಾಕಲು ಸಾಧ್ಯ ಎಂದು ತಾಲೂಕು ಹಿರಿಯ ಸಿವಿಲ್ ನ್ಯಾಯಾಧೀಶ ರವಿಬಾಬು ಚವ್ಹಾಣ್ ಹೇಳಿದರು.
ಬೋರಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿ ಮಕ್ಕಳಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿ ಮಾನಾಡಿದ ಅವರು, ಮಕ್ಕಳಿಗಿರುವ ಶಿಕ್ಷಣ ಹಕ್ಕು ಮತ್ತು ಅದನ್ನು ನೀಡಲು ಪಾಲಕರು ನಿರಾಕರಿಸಿದಲ್ಲಿ ಹಾಗೂ ಯಾವುದೇ ಸಮಸ್ಯೆ ಇದ್ದರೆ ಸಹಾಯವಾಣಿ ಸಂಖ್ಯೆ ೧೦೯೮ಗೆ ಕರೆ ಮಾಡಿ ತಿಳಿಸುವಂತೆ ಹೇಳಿದರು.
ಪಾಲಕರು ಮಕ್ಕಳನ್ನು ಯಾವುದೇ ಕೆಲಸಕ್ಕೆ ಕಳುಹಿಸದೆ ದಿನನಿತ್ಯ ಶಾಲೆಗೆ ಕಳುಹಿಸಿಕೊಡಬೇಕು. ಚಿಕ್ಕ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಿ ದೊರಕಿಸಿಕೊಡುವುದು ಎಲ್ಲರ ಹಕ್ಕಾಗಿದೆ ಎಂದರು.
ಶಾಲೆಯಲ್ಲಿರುವ ಶೌಚಗೃಹ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದನೇ ತರಗತಿ ಮಗು ಸಾಕ್ಷಿ ಶಿವಕುಮಾರ ಮಚ್ಕೂರೆ ಸಂವಿಧಾನ ಪೀಠಿಕೆಯನ್ನು ನಿರರ್ಗಳವಾಗಿ ಹೇಳಿರುವುದನ್ನು ಕೊಂಡಾಡಿ ವೈಯಕ್ತಿಕವಾಗಿ ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಒ ಮಹ್ಮದ್ ಮಕ್ಸೂದ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ್, ಮುಖ್ಯಗುರು ಧನರಾಜ ಮುಧಾಳೆ, ಸತೀಶ ಮಜಗೆ ಇತರರಿದ್ದರು.