ಸಿದ್ದಾಪುರ: ಯಕ್ಷಗಾನ ಕಲೆಯ ಉಳಿವು ಹಾಗೂ ಬೆಳವಣಿಗೆ ನಿರಂತರವಾಗಿರಬೇಕು. ಒಬ್ಬ ನಿಗರ್ವಿ ಕಲಾವಿದನ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಅನಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಪ್ರಸಿದ್ಧ ಭಾಗವತ ಹಾಗೂ ಪ್ರಾಚಾರ್ಯ ಕೆ.ಪಿ. ಹೆಗಡೆ ಗೋಳಗೋಡ ಹೇಳಿದರು.
ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ನೀಡುವ ಅನಂತಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಭಾನುವಾರ ಮಾತನಾಡಿದರು.
ಹಲವೆಡೆ ಸನ್ಮಾನ, ಪುರಸ್ಕಾರ ದೊರೆತಿದೆ. ಆದರೆ, ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಸನ್ನಿಧಿಯಲ್ಲಿ ಅನಂತ ಹೆಗಡೆ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಕಲೆಯಲ್ಲಿ ಆಸಕ್ತಿ ಉಳಿಸಿಕೊಂಡು ಬೆಳೆಸಬೇಕು. ಎಲ್ಲೆ ಇದ್ದರೂ ನಮ್ಮ ಕಲೆಯನ್ನು ಉಳಿಸಿಕೊಳ್ಳಬೇಕು. ಮುಂದಿನ ಯುವ ಪೀಳಿಗೆಗೆ ಯಕ್ಷಗಾನದ ದಾರಿ ತೋರಿಸಬೇಕು. ಯುವ ಕಲಾವಿದರು ಹಿರಿಯ ಕಲಾವಿದರ ಆದರ್ಶ ಪಾಲಿಸಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ವಿ.ಎಂ. ಭಟ್ಟ ಕೊಳಗಿ ಅಧ್ಯಕ್ಷತೆ ವಹಿಸಿದ್ದರು. ವಿ. ಉಮಾಕಾಂತ ಭಟ್ಟ ಕೆರೆಕೈ ಅಭಿನಂದನಾ ಮಾತನಾಡಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಅನಂತಮೂರ್ತಿ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಹೆಗಡೆ ತ್ಯಾರಗಲ್, ಲಲಿತಾ ಹೆಗಡೆ ಗೋಳಗೋಡ, ಪ್ರೀತಾ ಹೆಗಡೆ ಕೊಳಗಿ, ರಮೇಶ ಹೆಗಡೆ, ಗಾಯತ್ರಿ ಭಟ್ಟ ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆ.ಪಿ. ಹೆಗಡೆ ದಂಪತಿಯನ್ನು ಗೌರವಿಸಿದರು. ಭಾಗವತ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಆರ್. ಭಾಗವತ್ ತ್ಯಾರಗಲ್ ಸನ್ಮಾನ ಪತ್ರ ವಾಚಿಸಿದರು. ಗಣೇಶ ಹೆಗಡೆ ವಂದಿಸಿದರು, ಗಣಪತಿ ಹೆಗಡೆ ನಿರ್ವಹಿಸಿದರು.