ಬೆಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ದೈವದ ಕುರಿತ ಸಿನಿಮಾ ‘ಕರಿ ಹೈದ ಕೊರಗಜ್ಜ’. ಚಿತ್ರದ ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದಿದ್ದು, ಇತ್ತೀಚೆಗಷ್ಟೆ ಕುತೂಹಲಕಾರಿ ವಿಷಯವನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ಗುಳಿಗನ ಸ್ಥಳ
“ಪುತ್ತೂರಿನಲ್ಲಿ ಸೆಟ್ ನಿರ್ಮಾಣದ ವೇಳೆ, ಕೆಲಸಗಾರರು ಯಾವುದೋ ಆವೇಶ ಬಂದಂತೆ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳಿಯರು ಅರಿಶಿನ ನೀರು ಪ್ರೋಕ್ಷಿಸಿದರು. ಕೆಲವರನ್ನು ಆಸ್ಪತ್ರೆಗೂ ದಾಖಲಿಸಲಾಯಿತು. ನಂತರ ಅಲ್ಲಿ ಸೆಟ್ ನಿರ್ಮಿಸಲು ಯಾರೂ ಬರಲಿಲ್ಲ. ಅದು ಕರಾವಳಿಯ ಉಗ್ರರೂಪದ ದೈವ ‘ಗುಳಿಗ’ನ ಸ್ಥಳವೆಂದು ಕೆಲವರು ತಿಳಿಸಿದರು. ಹೀಗಾಗಿ ಸೆಟ್ ಸ್ಥಳಾಂತರಿಸಿದೆವು’ ಎಂದು ಸುದೀರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಬೇಬಿ…ನಿನ್ನ ಹುಟ್ಟುಹಬ್ಬಕ್ಕೆ ಸೂಪರ್ ಸರ್ಪ್ರೈಸ್ ನೀಡುತ್ತೇನೆ: ಜಾಕ್ವೆಲಿನ್ಗೆ ಜೈಲಿನಿಂದಲೇ ಮತ್ತೆ ಪತ್ರ ಬರೆದ ಸುಕೇಶ್
ಎದುರಾದ ಅಡೆತಡೆಗಳು
ಚಿತ್ರದಲ್ಲಿ ಗುಳಿಗ ದೈವದ ಪಾತ್ರದಲ್ಲಿ ಹಾಲಿವುಡ್, ಫ್ರೆಂಡ್ ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ನಟ, ನೃತ್ಯನಿರ್ದೇಶಕ ಸಂದೀಪ್ ಸೋಪರ್ಕರ್ ನಟಿಸಿದ್ದು, ಅವರ ಭಾಗದ ಚಿತ್ರೀಕರಣದ ವೇಳೆಯೂ ಅಡೆತಡೆಗಳು ಎದುರಾದವಂತೆ.
‘ಕರಿ ಹೈದ ಕೊರಗಜ್ಜ’ ಆಗಸ್ಟ್ನಲ್ಲಿ ತೆರೆಗೆ
ನಿರ್ದೇಶಕ ಸುಧೀರ್ ಅತ್ತಾವರ್ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು, ಹಲವು ವರ್ಷಗಳಿಂದ ಅಲ್ಲಿ ಯಾರೂ ವಾಸವಿರದ ಕಾರಣ ಪಾಳು ಬಿದ್ದಿದೆ. ಹೀಗಾಗಿ ದೈವಕ್ಕೆ ಪೂಜೆ ನಡೆಯದ ಕಾರಣ ಸಮಸ್ಯೆಗಳಾಗುತ್ತಿವೆ ಎಂದು ತಿಳಿದಿದೆ. ಕೂಡಲೇ ಅವರು ದೈವಕ್ಕೆ ಗುಡಿ ನಿರ್ಮಿಸಲು ಮುಂದಾಗಿದ್ದರು. ಚಿತ್ರದ ಸಂಕಲನ ಪೂರ್ಣಗೊಂಡ ಬೆನ್ನಲ್ಲೇ ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ಧೂರಿ ಕೋಲ ಸೇವೆ ನಡೆಸಿದ್ದಾರೆ. ‘ಕರಿ ಹೈದ ಕೊರಗಜ್ಜ’ ಆಗಸ್ಟ್ನಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ: ಶುಲ್ಕ ಪಾವತಿಸದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷೆ; ಶಿಕ್ಷಕಿ ಅಮಾನತು!