ಕೊಪ್ಪಳ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿರುವ ಅಸ್ಸಾಂ ಸಿಎಂ ಡಾ.ಹಿಮಂತ ಬಿಸ್ವ ಶರ್ಮಾ ನಗರದ ಗವಿಮಠಕ್ಕೆ ಸೋಮವಾರ ಭೇಟಿ ನೀಡಿ ಗವಿಶ್ರೀಗಳ ಆಶೀರ್ವಾದ ಪಡೆದರು.
ಮಠದ ಗದ್ದುಗೆ ದರ್ಶನ ಪಡೆದರು. ಬಳಿಕ ಗವಿಶ್ರೀಗಳೊಂದಿಗೆ ಮಠದ ಇತಿಹಾಸ, ಜಾತ್ರೋತ್ಸವ, ವಿದ್ಯಾರ್ಥಿ ನಿಲಯ ಮುಂತಾದ ವಿಷಯಗಳನ್ನು ಚರ್ಚಿಸಿದರು. ಜಾತ್ರೆ ಫೋಟೋ ಹಾಗೂ ವಿಡಿಯೋ ವೀಕ್ಷಿಸಿದರು. ಸ್ಥಳೀಯ ನಾಯಕರು, ಜನಪ್ರತಿನಿಧಿಗಳು ಮತ್ತಷ್ಟು ಮಾಹಿತಿ ತಿಳಿಸಿದರು. ನಂತರ ಶ್ರೀಗಳು ಸನ್ಮಾನಿಸಿದರು. ಮಠಕ್ಕೆ ಭೇಟಿ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ವಿಜಯ ಸಂಕಲ್ಪ ಯಾತ್ರೆ ಭಾನುವಾರ ಜಿಲ್ಲೆ ಪ್ರವೇಶಿಸಿದ್ದು, ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳದಲ್ಲಿ ಯಾತ್ರೆ ಪೂರ್ಣಗೊಳಿಸಿದೆ. ಇಂದು ಗಂಗಾವತಿ ಹಾಗೂ ಕಾರಟಗಿಯಲ್ಲಿ ಯಾತ್ರೆ ಮುಂದುವರೆಯಲಿದೆ. ಬೂದಗುಂಪಾ ಗ್ರಾಮದ ಮೂಲಕ ಯಾತ್ರೆ ಸಾಗಲಿದ್ದು, ಗಂಗಾವತಿ ತಲುಪಿ ಬಹಿರಂಗ ಸಮಾವೇಶ ನಡೆಸಲಿದೆ. ಬಳಿಕ ಕಾರಟಗಿಗೆ ತೆರಳಲಿದೆ.
ಇಂದಿನ ಕಾರ್ಯಕ್ರಮದಲ್ಲಿ ಅಸ್ಸಾಂ ಸಿಎಂ ಭಾಗಿಯಾಗಲಿದ್ದಾರೆ. ಸಚಿವ ಆನಂದ ಸಿಂಗ್, ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಮುಖಂಡರಾದ ಸಿ.ವಿ.ಚಂದ್ರಶೇಖರ್, ನವೀನ್ ಗುಳಗಣ್ಣನವರ ಇತರರು ಇದ್ದರು.