ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಕೊಡಗು ಪ್ರೆಸ್ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಅಶ್ವಿನಿ ಆಸ್ಪತ್ರೆ, ಮೈಸೂರು ಸುಯೋಗ್ ಆಸ್ಪತ್ರೆ, ಮಡಿಕೇರಿಯ ವಾಕ್ ಹಾಗೂ ಶ್ರವಣ ಇನ್ಪ್ಲಾಂಟ್ ಕ್ಲಿನಿಕ್ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫೆ೪ರಂದು ಸಾರ್ವಜನಿಕರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ಕುಪ್ಪಂಡ ರಾಜಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ನುರಿತ ವೈದ್ಯರಿಂದ ವಿವಿಧ ರೀತಿಯ ತಪಾಸಣೆ ನಡೆಯಲಿದೆ. ಅಶ್ವಿನಿ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸೇವೆಗಳು ದೊರೆಯುತ್ತಿವೆ. ಮುಂದಿನ ದಿನಗಳಲ್ಲಿ ೧೦೦ ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಇದರಿಂದ ಜಿಲ್ಲೆಯ ಜನರಿಗೆ ಮತ್ತಷ್ಟು ವೈದ್ಯಕೀಯ ಸೇವೆ ದೊರೆಯಲಿದೆ ಎಂದ ಅವರು, ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಡಾ.ದಿವ್ಯಜ್ಯೋತಿ ಮಾತನಾಡಿ, ಕ್ಯಾನ್ಸರ್ ತಡೆಗಟ್ಟಲು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮುಖ್ಯವಾಗಿದೆ. ಈ ರೀತಿಯ ಶಿಬಿರಗಳಿಂದ ಜನರ ಆರೋಗ್ಯದ ಮೇಲೆ ನಿಗಾ ಇಡಲು ಸಾಧ್ಯವಾಗಿದೆ. ಶಿಬಿರದಲ್ಲಿ ವಿವಿಧ ವಿಭಾಗದ ತಜ್ಞರು ಆಗಮಿಸಲಿದ್ದು, ಸಾಮಾನ್ಯ ತಪಾಸಾಣೆ, ಕಿವಿ, ಗಂಟಲು, ಮೂಗು, ಕತ್ತು, ತಲೆ, ಸರ್ಜಿಕಲ್ ಆಂಕೋಲಜಿಸ್ಟ್, ದಂತ ಚಿಕಿತ್ಸೆ, ಹೃದಯ, ವಾಕ್ ಮತ್ತು ಶ್ರವಣ ಸೇರಿದಂತೆ ಇನ್ನಿತರ ಕಾಯಿಲೆಗಳ ಪರೀಕ್ಷೆ ನಡೆಯಲಿದೆ. ಈ ಸಂದರ್ಭ ಇ.ಸಿ.ಜಿ. ಮತ್ತು ಎಕೋ ತಪಾಸಣೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಡಾ.ಪವನ್ ಮಾತನಾಡಿ, ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನು ಸರಳ ಪರೀಕ್ಷೆಯಿಂದ ಪತ್ತೆಹಚ್ಚಿ ತ್ವರಿತ ಚಿಕಿತ್ಸೆಯಿಂದ ನಿಯಂತ್ರಿಸಬಹುದು. ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪ್ರೆಸ್ಕ್ಲಬ್ ೨೫ ವರ್ಷದ ಸಂಭ್ರದಲ್ಲಿರುವ ಹಿನ್ನೆಲೆ ವರ್ಷಪೂರ್ತಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ಪತ್ರಕರ್ತರು, ಅವರ ಕುಟುಂಬ ಸೇರಿದಂತೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೆಸ್ಕ್ಲಬ್ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಆರೋಗ್ಯ ಸಮಿತಿಯ ಸಂಚಾಲಕರುಗಳಾದ ಜೆರುಸ್ ಥೋಮಸ್ ಅಲೆಕ್ಸಾಂಡರ್, ಅಬ್ದುಲ್ಲಾ ಹಾಜರಿದ್ದರು.