ತುಮಕೂರು: ಕಳ್ಳರಿಗೆ ನಿಧಿಯ ಆಸೆ ಎಷ್ಟಿತ್ತು ಎಂದರೆ ಇವರು ಪುರಾತನ ದೇವಾಲಯದ ಗರ್ಭಗುಡಿಯನ್ನೂ ಬಿಡದೇ ನೆಲವನ್ನು ಅಗೆದಿದ್ದಾರೆ!
ನಿಧಿಯ ಆಸೆಗೆ ಅಮಾವಾಸ್ಯೆ ದಿನವೇ ದೇವಾಲಯದ ಖದೀಮರು ಗರ್ಭಗುಡಿ ಅಗೆದಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈ ಘಟನೆ ಪುರಾತನ ಗುಮ್ಮನಹಳ್ಳಿ ಆಂಜನೇಯ ದೇವಸ್ಥಾನದಲ್ಲಿ ನಡೆದಿದೆ. ಈ ದೇವಾಲಯ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಮ್ಮನಹಳ್ಳಿಯಲ್ಲಿದೆ.
ಶಿರಾ-ದೊಡ್ಡಕೆರೆಯ ಹಳ್ಳದ ದಂಡೆಯಲ್ಲಿರುವ ಪುರಾತನ ಕಾಲದ ಆಂಜನೇಯ ದೇವಾಲಯದಲ್ಲಿ ನಿಧಿ ಇದೆ ಎಂದು ನಂಬಿ ನಿನ್ನೆ ಅಮಾವಾಸ್ಯೆ ಇದ್ದ ಹಿನ್ನೆಲೆ. ನಿಧಿಯಾಸೆಗೆ ರಾತ್ರೋರಾತ್ರಿ ಕಳ್ಳರು ಗರ್ಭಗುಡಿ ಅಗೆದಿದ್ದಾರೆ.
ಅಂಜನೇಯ ವಿಗ್ರಹದ ಕೆಳಗೆ ಕಳ್ಳರು ಸುಮಾರು 10 ಅಡಿಯುದ್ದಕ್ಕೆ ಅಗೆದಿದ್ದು ಖಾಲಿ ಕೈಯಲ್ಲಿ ವಾಪಸ್ ಆಗಿರುವುದು ಮಾತ್ರ ಸತ್ಯ.
ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಘಟನೆಗೆ ಸಂಬಂಧಿಸಿದಂತೆ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಈ ಖದೀಮರ ಜಾಡನ್ನು ಹುಡುಕಿಕೊಂಡು ಗರ್ಭಗುಡಿ ಅಗೆದಿರುವ ಕಳ್ಳರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.