ಬೀದರ್: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಜಾಗತಿಕ ಅಭಿಯಾನ ಇದೀಗ ಕರ್ನಾಟಕಕ್ಕೂ ಪ್ರವೇಶಿಸಿದ್ದು, ಇಂದು ಸದ್ಗುರು ಬೀದರ್ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿದರು.
ಮಣ್ಣು ರಕ್ಷಣೆ ಸಲುವಾಗಿ 27 ದೇಶಗಳಲ್ಲಿ ಒಟ್ಟು 30 ಸಾವಿರ ಕಿ.ಮೀ. ದೂರವನ್ನು 100 ದಿನಗಳಲ್ಲಿ ಏಕಾಂಗಿಯಾಗಿ ಬೈಕ್ನಲ್ಲಿ ಸಂಚರಿಸಿ ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಜಾಗತಿಕ ಅಭಿಯಾನವನ್ನು ಇದೇ ಮಾ. 21ರಂದು ಸದ್ಗುರು ಲಂಡನ್ನಲ್ಲಿ ಆರಂಭಿಸಿದ್ದರು. ಅಲ್ಲಿಂದ 26 ದೇಶಗಳಲ್ಲಿ ಬೈಕ್ನಲ್ಲಿ ಸಂಚರಿಸಿ ಗುಜರಾತ್ ಮೂಲಕ ಭಾರತಕ್ಕೆ ಪ್ರವೇಶ ಮಾಡಿದ್ದ ಸದ್ಗರು, 94ನೇ ದಿನವಾದ ಇಂದು ಬೀದರ್ ಮೂಲಕ ಕರ್ನಾಟಕವನ್ನು ಪ್ರವೇಶ ಮಾಡಿದರು.
ಯಾವುದೇ ನಿಯೋಜಿತ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಆಗಿಲ್ಲದಿದ್ದರೂ 1000ಕ್ಕೂ ಹೆಚ್ಚು ಜನರು ಬೀದರ್ ಬಳಿ ಸದ್ಗುರುಗಳು ಪ್ರಯಾಣಿಸುವ ಮಾರ್ಗದಲ್ಲಿ ಭಾವಪೂರ್ಣವಾದ ಸ್ವಾಗತ ಕೋರಿದರು. ಹಾಡು, ನೃತ್ಯ, ಡೊಳ್ಳು ಕುಣಿತ ಸಮೇತ ಎತ್ತಿನಗಾಡಿಗಳಲ್ಲಿ ಬಂದ ಸ್ವಯಂಸೇವಕರು ಹಾಗೂ ಉತ್ಸುಕ ಜನರು ಸದ್ಗುರುವನ್ನು ಕರ್ನಾಟಕಕ್ಕೆ ಬರಮಾಡಿಕೊಂಡರು.
ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ, ಬಸವಕಲ್ಯಾಣದ ಸದಸ್ಯ ಶರಣು ಸಲಗಾರ್ ಮತ್ತು ಹುಮನಾಬಾದ್ ಸದಸ್ಯ ರಾಜಶೇಖರ್ ಪಾಟೀಲ್ ಉಪಸ್ಥಿತರಿದ್ದು ಸದ್ಗುರು ಅವರನ್ನು ಭೇಟಿ ಮಾಡಿ ಸ್ವಾಗತಿಸಿದರು.
ಇದುವರೆಗೆ 93 ದಿನಗಳಲ್ಲಿ ಸದ್ಗುರು 26,000 ಕಿ.ಮೀ. ದೂರವನ್ನು ಕ್ರಮಿಸಿದ್ದು, 562 ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಿದ್ದರು. ಪ್ರತಿದಿನ ಬೈಕ್ ಸಂಚಾರದಲ್ಲಿದ್ದು ಮಣ್ಣು ರಕ್ಷಿಸಿ ಅಭಿಯಾನ ಕೈಗೊಂಡಿರುವ ಸದ್ಗರು, ದಿನವೊಂದಕ್ಕೆ ಸರಾಸರಿ 8ರಿಂದ 9 ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.