ಸಿರಗುಪ್ಪ: ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ಹಿಂದು ಮಹಾಸಭಾ ಪ್ರತಿಷ್ಠಾಪಿಸಿದ್ದ ಹಿಂದು ಮಹಾ ಗಣಪತಿಯನ್ನು ಒಂಬತ್ತನೇ ದಿನವಾದ ಶನಿವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ಮೂರ್ತಿಯ ಮೆರವಣಿಗೆ ನಡೆಯಿತು. ಡಿ.ಜೆ.ಮತ್ತು ಡೊಳ್ಳು ಸೇರಿ ಹಲವು ಜನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಸಾವಿರಾರು ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ ಪರಸ್ಪರ ಬಣ್ಣ ಎರಚಿಕೊಂಡು ಡಿ.ಜೆ. ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ನಗರದ ಗಾಂಧಿವೃತ್ತ, ಡಾ.ಅಂಬೇಡ್ಕರ್ ವೃತ್ತದ ಮೂಲಕ ತುಂಗಭದ್ರಾ ನದಿವರೆಗೆ ಮೆರವಣಿಗೆ ನಡೆಸಿ ನಂತರ ವಿಸರ್ಜನೆ ಮಾಡಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.