ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭವಿಷ್ಯ ನುಡಿದ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗೆ ಸಂಕಷ್ಟ ಎದುರಾಗಿದೆ.
ಗೊರವಯ್ಯ ಹಾಗೂ ಭಕ್ತರು ಧರ್ಮದರ್ಶಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಕಾರ್ಣಿಕ ನುಡಿ ವರ್ಷಕ್ಕೆ ಒಂದೇ ಬಾರಿ ಆಗುವುದು ಮತ್ತು ಕಾರ್ಣಿಕ ಹೇಳುವ ಹಕ್ಕು ಇರುವುದು ಗೊರವಯ್ಯ ರಾಮಜ್ಜರಿಗೆ ಮಾತ್ರ. ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡೋದು ಗೊರವಯ್ಯ ಮಾತ್ರ. ಆದರೆ, ಮೈಲಾರ ದೇವಸ್ಥಾನದ ಧರ್ಮದರ್ಶಿ ವೆಂಕಪಯ್ಯ ಒಡೆಯರ್ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಅಲ್ಲದೆ, ರಾಜಕೀಯ ನಾಯಕರನ್ನು ಭಯ ಬಿಳಿಸಿ, ಹಣ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ದಿಗ್ವಿಜಯ ನ್ಯೂಸ್ಗೆ ಗೊರವಯ್ಯ ರಾಮಜ್ಜ ಹೇಳಿಕೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರವನ್ನು ಪೂರ್ಣಗೊಳಿಸಲಿದ್ದಾರೆ. ಆರು ತಿಂಗಳಲ್ಲಿ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಪರ ಭಕ್ತರು ಹಾಗೂ ಆಡಳಿತ ಮಂಡಳಿ ಬ್ಯಾಟ್ ಬೀಸಿದ್ದಾರೆ. ವೆಂಕಪಯ್ಯ ಒಡೆಯರ್ ಹೇಳುವ ಥರ ಕಾರ್ಣಿಕ ನಡೆದೆ ಇಲ್ಲ. ವೆಂಕಪ್ಪಯ್ಯ ಒಡೆಯರ್ ನುಡಿದ ವಿಶ್ಲೇಷಣೆ ಸುಳ್ಳು ಎಂದು ರಾಮಜ್ಜ ತಿಳಿಸಿದರು.
ಬೊಮ್ಮಾಯಿ ಸರ್ಕಾರ ಅವಧಿ ಕೇವಲ ಆರು ತಿಂಗಳು ಮಾತ್ರ. ಸರ್ಕಾರ ಬೀಳುತ್ತದೆ ಎಂದು ವೆಂಕಪಯ್ಯ ಒಡೆಯರ್ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದನ್ನು ಕಾರ್ಣಿಕ ನುಡಿ ಎಂದೇ ಬಿಂಬಿಸಿದ್ದರು. ಆದರೆ, ಅದು ಸುಳ್ಳು ಎಂದಿರುವ ರಾಮಜ್ಜ, ಪದೇ ಪದೇ ಈ ರೀತಿ ವಿಶ್ಲೇಷಣೆ ಮಾಡಬಾರದು. ಕಾರ್ಣಿಕ ವರ್ಷಕ್ಕೊಮ್ಮೆ ಮಾತ್ರ ನುಡಿಯಲಾಗುತ್ತದೆ. ಕಾರ್ಣಿಕ ನುಡಿಯೋದು ನಾನು. ಉಪವಾಸ ಇದ್ದು, ಬಿಲ್ಲು ಏರಿ ಕಾರ್ಣಿಕ ನುಡಿಯುತ್ತೇನೆ. ವೆಂಕಪ್ಪಯ್ಯ ಒಡೆಯರ್ ಈ ರೀತಿ ಹೇಳಿದರೆ ಭಕ್ತರು ವಿಶ್ವಾಸ ಕಳೆದುಕೊಳ್ತಾರೆ ಎಂದು ಹೇಳುವ ಮೂಲಕ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿರುದ್ಧ ಕಾರ್ಣಿಕದ ಗೊರವಯ್ಯನವರ ಅಸಮಾಧಾನ ಹೊರಹಾಕಿದರು. (ದಿಗ್ವಿಜಯ ನ್ಯೂಸ್)
2022ರ ಮಾರ್ಚ್ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ