More

    ಭಾರತದ 8 ಸಿಟಿ ಹೆಚ್ಚು ಮಲಿನ: ವಿಶ್ವ ವಾಯು ಗುಣಮಟ್ಟ ಸೂಚ್ಯಂಕ; ಉತ್ತಮದಲ್ಲಿ ಏಕೈಕ ನಗರ

    ನವದೆಹಲಿ: ಏಷ್ಯಾದ 10 ಅತಿ ಹೆಚ್ಚು ಕಲುಷಿತ ನಗರಗಳ ಪೈಕಿ ಭಾರತದ್ದೇ ಎಂಟು ನಗರಗಳಿವೆ ಎಂದು ವಿಶ್ವ ವಾಯು ಗುಣಮಟ್ಟ ಸೂಚ್ಯಂಕ (ಡಬ್ಲ್ಯುಎಕ್ಯೂಐ) ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಉತ್ತಮ ವಾಯು ಗುಣಮಟ್ಟದ ಅಗ್ರಶ್ರೇಯಾಂಕದ 10 ನಗರಗಳಲ್ಲಿ ಆಂಧ್ರ ಪ್ರದೇಶದ ರಾಜಾಮಹೇಂದ್ರವರ್ಮಂ ಸ್ಥಾನ ಪಡೆದಿದೆ. ಈ ಗೌರವ ಗಳಿಸಿದ ಭಾರತದ ಏಕೈಕ ನಗರ ಇದಾಗಿದೆ. ಚೀನಾದ ಲುಝೋವುದ ಕ್ಷಿಯಾವೊಶಾಂಗ್ ಬಂದರು ಮತ್ತು ಮಂಗೋಲಿಯಾದ ಉಲಾನ್​ಬತಾರ್​ನ ಬಯಾಂಕೊಷು ಕೂಡ ಹೆಚ್ಚು ಮಾಲಿನ್ಯದ ಪ್ರದೇಶಗಳಾಗಿವೆ.

    ವಾಯು ಮಾಲಿನ್ಯದ ಋಣಾತ್ಮಕ ಶ್ರೇಯಾಂಕದಲ್ಲಿ ಗುರುಗ್ರಾಮದ ಸೆಕ್ಟರ್-51 ಅಗ್ರಸ್ಥಾನಿಯಾಗಿದೆ. ಅದರ ಎಕ್ಯೂಐ 679. ರೇವಾರಿ ಸಮೀಪದ ಧಾರುಹೇರಾ ಪಟ್ಟಣ 543 ಹಾಗೂ ಮುಜಫರ್​ಪುರ 316 ಎಕ್ಯೂಐನಲ್ಲಿ ಗುರುತಿಸಲ್ಪಟ್ಟಿವೆ. ಆದರೆ ವಾಯುಮಾಲಿನ್ಯದಿಂದಾಗಿ ಸದಾ ಸುದ್ದಿಯಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿಯ ಸಂಗತಿಯಾಗಿದೆ. ಲಖನೌದ ತಾಲ್ಕತೋರ್ (298), ಡಿಆರ್​ಸಿಸಿ ಆನಂದಪುರ, ಬೇಗುಸರಾಯ್ (269), ಭೋಪಾಲ್ ಚೌರಾಹಾ, ದೇವಾಸ್ (266) ಖಡಕ್​ಪಾಡಾ, ಕಲ್ಯಾಣ್ (256), ದರ್ಶನ್ ನಗರ್, ಛಪ್ರಾ (239) ಕೂಡ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿವೆ.

    ಮಾನಕ ವಿವರ: ಶೂನ್ಯದಿಂದ 50ರವರೆಗಿನ ಎಕ್ಯೂಐ ಅನ್ನು ‘ಉತ್ತಮ’ ಎಂದು ಪರಿಗಣಿಸಲಾಗುತ್ತದೆ, 51-100ರವರೆಗೆ ‘ಸಾಧಾರಣ’, 101ರಿಂದ 150 ’ಅನಾರೋಗ್ಯಕರ’, 201ರಿಂದ 300 ‘ತೀರಾ ಅನಾರೋಗ್ಯಕರ’ ಮತ್ತು 300+ ‘ಅಪಾಯಕರ’ ಎಂದು ಪರಿಗಣಿಸಲಾಗುತ್ತದೆ. ಯುಎಸ್-ಇಪಿಎ 2016ರ ಮಾನಕದ ಆಧಾರದಲ್ಲಿ ಇದನ್ನು ನಿರ್ಧರಿಸಲಾಗುತ್ತದೆ. 2007ರಲ್ಲಿ ಆರಂಭವಾದ ಡಬ್ಲ್ಯುಎಕ್ಯೂಐ ಯೋಜನೆಯು ವಾಯು ಮಾಲಿನ್ಯ ಕುರಿತು ಜನಜಾಗೃತಿ ಮೂಡಿಸುವ ಗುರಿ ಹೊಂದಿದೆ. ಏಕೀಕೃತ ಹಾಗೂ ವಿಶ್ವವ್ಯಾಪಿ ವಾಯು ಗುಣಮಟ್ಟದ ಮಾಹಿತಿ ಒದಗಿಸುವುದು ಕೂಡ ಅದರ ಉದ್ದೇಶವಾಗಿದೆ.

    ಚಳಿಗಾಲದಲ್ಲಿ ವಾಯು ಗುಣಮಟ್ಟ ಕುಸಿತ: ಶೀತ ಗಾಳಿಯು ಸಾಮಾನ್ಯವಾಗಿ ಭೂಮಿಯ ಮೇಲ್ಮೈ ಸಮೀಪದಲ್ಲಿ ಮಾಲಿನ್ಯಕಾರಕಗಳನ್ನು ಹೆಚ್ಚು ಪ್ರಮಾಣದಲ್ಲಿ ಹಿಡಿದಿಡುವುದರಿಂದ ಚಳಿಗಾಲದಲ್ಲಿ ವಾಯುಮಾಲಿನ್ಯ ಮಟ್ಟ ಏರುತ್ತದೆ ಎನ್ನುವುದು ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆಂಡ್ ರೀಸರ್ಚ್ ಫೋರ್​ಕಾಸ್ಟಿಂಗ್ ಆಂಡ್ ರೀಸರ್ಚ್ (ಎಸ್​ಎಎಫ್​ಎಆರ್)- ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮ್ಯಾನೇಜ್​ವೆುಂಟ್​ನ ತಜ್ಞರ ಅಭಿಪ್ರಾಯವಾಗಿದೆ. ರಾತ್ರಿ ತಾಪಮಾನ ಕೂಡ ವಾಯು ಮಾಲಿನ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಸ್ಪೋಟದಿಂದ ವಾಯು ಮಾಲಿನ್ಯ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯಯಲ್ಲಂತೂ ಅದು ಅಪಾಯಕಾರಿ ಮಟ್ಟವನ್ನು ತಲುಪುತ್ತದೆ. ಕೂಳೆ ಸುಡುವುದು ಕೂಡ ಮಾಲಿನ್ಯ ಮಟ್ಟ ಏರಲು ಕಾರಣವಾಗುತ್ತದೆ.

    ದೆಹಲಿಯಲ್ಲಿ ಅಪಾಯಕಾರಿ: ದೀಪಾವಳಿಯ ಹಬ್ಬದ ಸಾಲಿನ ಆರಂಭದಲ್ಲಿ ದೆಹಲಿಯಲ್ಲಿ ವಾಯು ಗುಣಮಟ್ಟ ಅಪಾಯಕಾರಿಯಾದ 266ರ ಎಕ್ಯೂಐನಲ್ಲಿದ್ದು, ಸರ್ಕಾರ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ದೆಹಲಿ ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್​ಸಿಆರ್) ವಾಯು ಗುಣಮಟ್ಟ ಪಾತಾಳಕ್ಕೆ ಕುಸಿಯಲಿದೆ ಎಂದು ಸರ್ಕಾರ ಈ ಹಿಂದೆಯೇ ಭವಿಷ್ಯ ನುಡಿದಿತ್ತು. ಶನಿವಾರ ಕೂಡ ಎಕ್ಯೂಐ 262 ಆಗಿತ್ತು. ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಮತ್ತು ಬಯಲು ಖಾನಾವಳಿಗಳಲ್ಲಿ ಕಲ್ಲಿದ್ದಲು ಮತ್ತು ಕಟ್ಟಿಗೆ ಬಳಸುವುದನ್ನು ನಿಷೇಧಿಸುವುದು ಒಳಗೊಂಡಿರುವ ಜಿಆರ್​ಎಪಿಯ 2ನೇ ಹಂತವನ್ನು ಜಾರಿ ಗೊಳಿಸುವಂತೆ ವಾಯು ಗುಣಮಟ್ಟ ನಿರ್ವಹಣೆ ಆಯೋ ಗದ ಅಧಿಕಾರಿಗಳು ಬುಧವಾರವೇ ನಿರ್ದೇಶಿಸಿದ್ದರು.

    ಮಗಳು ಅವೆಲ್ಲ ಅರ್ಥವಾಗದಷ್ಟು ಚಿಕ್ಕವಳು: ಕೊಹ್ಲಿ ಆಟಕ್ಕೆ ಸಂಭ್ರಮಿಸಿ ಅನುಷ್ಕಾ ಪ್ರತಿಕ್ರಿಯಿಸಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts