ಮುಂಡರಗಿ: ತಾಲೂಕಿನಲ್ಲಿ ಕರೊನಾ ಸೋಂಕು ಮುಂದುವರೆದಿದ್ದೂ ಪಟ್ಟಣದ ಬನಶಂಕರಿ ಓಣಿಯ 65 ವರ್ಷದ ವೃದ್ಧೆಗೆ ಕರೊನಾ ಸೋಂಕು ಶನಿವಾರ ದೃಢಪಟ್ಟಿದೆ. ವೃದ್ಧೆ ವಾಸ ಮಾಡುತ್ತಿದ್ದ ಭಾಗದಲ್ಲಿ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಬನಶಂಕರಿ ಓಣಿಯ ವೃದ್ಧೆಯು ಇತ್ತೀಚೆಗೆ ಬೆಂಗಳೂರಿನಿಂದ ಮರಳಿದ್ದರು. ವೃದ್ಧೆ ವಾಸವಿದ್ದ ಓಣಿಯ ರಸ್ತೆಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಓಣಿಯ ಒಳಗಡೆ ಹೋಗದಂತೆ ಮತ್ತು ಹೊರಗಡೆ ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವೃದ್ಧೆಯ ಸಂಪರ್ಕದಲ್ಲಿದ್ದ ಇಬ್ಬರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ.
ಗ್ರಾಮಗಳಿಗೂ ವಕ್ಕರಿಸಿದ ಕೋವಿಡ್-19
ಶಿರಹಟ್ಟಿ: ಪಟ್ಟಣಕ್ಕೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಈಗ ಹಳ್ಳಿಗಳಿಗೂ ಆವರಿಸಿದ್ದರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಈವರೆಗೆ ತಾಲೂಕಿನಲ್ಲಿ 6 ಕೇಸ್ಗಳು ಪತ್ತೆಯಾಗಿದ್ದವು. ಆದರೆ, ಶನಿವಾರ ಮತ್ತೆ 7 ಪ್ರಕರಣಗಳು ಪತ್ತೆಯಾಗಿದ್ದರಿಂದ ಒಂದೇ ವಾರದಲ್ಲಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.
ಈ ಮೊದಲು ಸೋಂಕು ತಗುಲಿದ್ದ ಮಜ್ಜೂರ ತಾಂಡಾದ 29 ವರ್ಷದ ಮಹಿಳೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಮಜ್ಜೂರ ಗ್ರಾಮದ 14 ವರ್ಷದ ಬಾಲಕಿ, ಶಿವಾಜಿನಗರದ (ಮಜ್ಜೂರ ತಾಂಡಾ) 22 ಹಾಗೂ 80 ವರ್ಷದ ಮಹಿಳೆಯರು ಮತ್ತು 60 ವರ್ಷದ ಪುರುಷ ಸೇರಿ ಮತ್ತೆ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ಶಿರಹಟ್ಟಿ ಪಟ್ಟಣದ 10 ವರ್ಷದ ಬಾಲಕಿ, ಬನ್ನಿಕೊಪ್ಪ ಗ್ರಾಮದ 26 ವರ್ಷದ ಯುವಕ, ಛಬ್ಬಿ ಗ್ರಾಮದ 22 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಿಗೆ ಹೇಗೆ ಸೋಂಕು ತಗುಲಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬನ್ನಿಕೊಪ್ಪ ಗ್ರಾಮದ ಯುವಕ ಗದಗ ತಾಲೂಕಿನ ಹರ್ತಿ ಗ್ರಾಮಕ್ಕೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದನು. ಈ ಸಂದರ್ಭದಲ್ಲಿ ಈಗಾಗಲೇ ಕರೊನಾ ಸೋಂಕಿನಿಂದ ಬಳಲುತ್ತಿರುವ ಖಾಸಗಿ ವೈದ್ಯನೊಂದಿಗೆ ಒಡನಾಟ ಹೊಂದಿದ್ದರಿಂದ ಈತನಿಗೂ ಸೋಂಕು ತಗುಲಿದೆ ಎಂದು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ತಿಳಿಸಿದ್ದಾರೆ.