ಬಾಳೆಹೊನ್ನೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆ, ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ನಾಲ್ಕು ತಾಲೂಕುಗಳಲ್ಲಿ ವಿಶ್ವ ಹಿಂದು ಪರಿಷತ್ನಿಂದ ಮನೆ ಮನೆಗೆ ಮಂತ್ರಾಕ್ಷತೆ ವಿತರಿಸಿ ಆಹ್ವಾನ ನೀಡಲಾಯಿತು ಎಂದು ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.
ಭಾನುವಾರ ರಂಭಾಪುರಿ ಪೀಠದ ಸೋಮೇಶ್ವರ ನಗರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವಿಹಿಂಪ 6 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮಹಾ ಸಂಪರ್ಕ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಒಂದೇ ದಿನ ಎಲ್ಲ ಹಿಂದು ಬಾಂಧವರ ಮನೆಗಳಿಗೆ ಭೇಟಿ ನೀಡಿ ರಾಮಮಂದಿರ ಉದ್ಘಾಟನೆ ಆಹ್ವಾನ, ಮಂತ್ರಾಕ್ಷತೆ ನೀಡಿ ಅಯೋಧ್ಯೆ ಕುರಿತು ವಿವರ ತಿಳಿಸಿ ಕರಪತ್ರಗಳನ್ನು ವಿತರಿಸಿದರು ಎಂದರು.
ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಾಲಯದಲ್ಲಿ ಜ.22ರಂದು ಬೆಳಗ್ಗೆ 8 ಗಂಟೆಯಿಂದ ರಾಮತಾರಕ ಹೋಮ ಜರುಗಲಿದೆ. ಯಜ್ಞ ಪೂರ್ಣಾಹುತಿ ಬಳಿಕ ರಾಮ ಭಜನೆ, ಎಲ್ಇಡಿ ಪರದೆಯಲ್ಲಿ ಅಯೋಧ್ಯೆ ನೇರ ಪ್ರಸಾರ, ಸಂಘಟನೆಯ ಹಿರಿಯರಿಂದ ಹಿತನುಡಿ ನಡೆಯಲಿದೆ. ಮಧ್ಯಾಹ್ನ ರಾಮಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಫೆ.19ರಂದು ವಿಹಿಂಪ 50 ಪ್ರಮುಖರು ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಇದೊಂದು ವಿಶೇಷ ಅಭಿಯಾನವಾಗಿದ್ದು ಪ್ರತಿ ಮನೆಯಲ್ಲೂ ನಮ್ಮ ಕಾರ್ಯಕರ್ತರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು ಎಂದರು.
ಅಭಿಯಾನದಲ್ಲಿ ಆರ್ಎಸ್ಎಸ್ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಹೇಶ್ಚಂದ್ರ, ಬಿ.ವೆಂಕಟೇಶ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಉಮೇಶ್, ತಾಲೂಕು ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಸಂದೀಪ್ ಶೆಟ್ಟಿ, ಬಿ.ಜಗದೀಶ್ಚಂದ್ರ, ಅರುಣ್ ಭಂಡಾರಿ ಇತರರಿದ್ದರು.
ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹನುಮಾನ್ ಚಾಲೀಸಾ, ಸುಂದರಕಾಂಡ ಪಾರಾಯಣ, ರಾಮರಕ್ಷಾ ಸ್ತೋತ್ರ ಪಠಣಗಳನ್ನು ಮಾಡಬಹುದು. ಅಂದು ಸಂಜೆ ಹಿಂದುಗಳು ಮನೆ ಮುಂದೆ ಉತ್ತರ ದಿಕ್ಕಿಗೆ ಕನಿಷ್ಠ 5 ಹಣತೆ ಹಚ್ಚಿ ರಾಮಜ್ಯೋತಿ ಬೆಳಗಿಸಬೇಕು. ಎಲ್ಲ ದೇವತೆಗಳು ಪ್ರಸನ್ನರಾಗಲಿ, ವಾತಾವರಣವೂ ರಾಮಮಯವಾಗಿಸುವುದು ಉದ್ದೇಶ.
ಆರ್.ಡಿ.ಮಹೇಂದ್ರ
ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ