ಬೀದರ್: ಗೆಳೆಯೋತ್ಸವ ಹಾಗೂ ಚಿತ್ರ ನಟ ಹಣ್ಮು ಪಾಜಿ ಅವರ ಜನ್ಮದಿನದ ಪ್ರಯುಕ್ತ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 55 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ರಕ್ತದಾನ ತುರ್ತು ಸಂದರ್ಭದಲ್ಲಿ ಜೀವ ಉಳಿಸುತ್ತದೆ. ರಕ್ತದಾನ ಮಾಡಿರುವ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಹೇಳಿದರು.
ಗೆಳೆಯರ ಬಳಗವು ರಕ್ತದಾನ ಶಿಬಿರದ ಮೂಲಕ ತಮ್ಮ ಜನ್ಮದಿನ ಆಚರಿಸಿರುವುದು ಸಂತಸ ಉಂಟು ಮಾಡಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಮಾಡುವೆ ಎಂದು ಚಿತ್ರ ನಟ ಹಣ್ಮು ಪಾಜಿ ನುಡಿದರು.
ರಕ್ತದಾನಿಗಳನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು. ಪ್ರಮುಖರಾದ ತರುಣ್ ಎಸ್. ನಾಗಮಾರಪಳ್ಳಿ, ಅನಂತ ರೆಡ್ಡಿ, ರಮೇಶ ಬಿರಾದಾರ ಚಿಟ್ಟಾ, ಬಸವರಾಜ ಶಹಾಪುರೆ, ವಿವೇಕ ವಾಲಿ, ಫಿರೋಜ್ ಖಾನ್, ನವಾಜ್ ಖಾನ್, ಶ್ರೀಮಂತ ಸಪಾಟೆ, ಉಮೇಶ ಶಹಾಪುರೆ, ಓಂಪ್ರಕಾಶ ಕೌಟೆ, ಹಣ್ಮು ಪಾಜಿ ಗೆಳೆಯರ ಬಳಗದ ಸದಸ್ಯರು ಹಾಗೂ ಇತರರು ಇದ್ದರು.