ಕಟಕ್: ಒಡಿಶಾದ ಕಟಕ್ ಜಿಲ್ಲೆಯ ಮಹಾನದಿಯಲ್ಲಿ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಈಗ ಗೋಚರಿಸಿ ಅಚ್ಚರಿ ಮೂಡಿಸಿದೆ.
15-16ನೇ ಶತಮಾನದ ಈ ದೇವಾಲಯ 19ನೇ ಶತಮಾನದಲ್ಲಿ ನೀರಿನಲ್ಲಿ ಮುಳುಗಡೆಯಾಗಿತ್ತು ಎಂದು ಈ ದೇಗುಲದ ಬಗ್ಗೆ ಅಧ್ಯಯನ ನಡೆಸುತ್ತಿರುವ ಭಾರತೀಯ ಕಲೆ ಮತ್ತು ಸಂಸ್ಕೃತಿಯ ರಾಷ್ಟ್ರೀಯ ಟ್ರಸ್ಟ್ನ ಸಂಶೋಧನಾ ತಂಡ ಹೇಳಿದೆ.
60 ಅಡಿ ಎತ್ತರದ ಈ ದೇವಾಲಯವನ್ನು ಮಸ್ತಕ ಶೈಲಿಯನ್ನು ನಿರ್ಮಿಸಲಾಗಿದೆ. ವಿಷ್ಣುವಿನ ರೂಪವಾದ ಗೋಪಿನಾಥ ವಿಗ್ರಹವನ್ನು ಇಲ್ಲಿ ಪೂಜಿಸಲಾಗುತ್ತಿತ್ತು. 19ನೇ ಶತಮಾನದಲ್ಲಿ ಮಹಾನದಿ ಹರಿವಿನ ದಿಕ್ಕು ಬದಲಾದ ಕಾರಣ ಪದ್ಮಾವತಿ ಗ್ರಾಮ ಮುಳುಗಡೆಯಾಯಿತು. ಆಗ ದೇವಸ್ಥಾನವೂ ಮುಳುಗಡೆಯಾಗಿದ್ದು, ದೇವಸ್ಥಾನದ ಮೂರ್ತಿಗಳನ್ನು ತೆಗೆದು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ತಂಡ ತಿಳಿಸಿದೆ.
ನದಿಯೊಳಗೆ 22ಕ್ಕೂ ಹೆಚ್ಚು ದೇವಸ್ಥಾನಗಳಿದ್ದು ಅದರಲ್ಲಿ ಎತ್ತರದ ದೇವಸ್ಥಾನವಾಗಿರುವ ಗೋಪಿನಾಥ ದೇವಾಲಯ ಮಾತ್ರ ಬೇಸಿಗೆ ಸಮಯದಲ್ಲಿ ನೀರಿನ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಏಳು ವರ್ಷದ ಹಿಂದೆ ಕೂಡ ದೇಗುಲ ಕಾಣಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.