ರಾಣೆಬೆನ್ನೂರ: ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮುಗಳ ಮೇಲೆ ತಹಸೀಲ್ದಾರ್ ಶಂಕರ ಜಿ.ಎಸ್. ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ 69 ಸಾವಿರ ರೂ. ಮೌಲ್ಯದ 47.25 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ನಗರದ ನೆಹರು ಮಾರುಕಟ್ಟೆಯ ಪ್ರದೇಶದ ಗೋದಾಮುಗಳ ಮೇಲೆ ಅಧಿಕಾರಿಗಳಿಂದ ದಾಳಿ ನಡೆಯಿತು. ನಗರದ ಚಂದ್ರು ನೆಗಳೂರ, ದೀಪಕ ಹರವಿಶೆಟ್ಟರ, ಗುರುರಾಜ ಉಪ್ಪಿನ ಎಂಬುವರು ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹರ ಠಾಣೆ ಪಿಎಸ್ಐ ಸುನೀಲ ತೆಲಿ, ಆಹಾರ ಇಲಾಖೆ ಶಿರಸ್ತೇದಾರ ಎಂ.ಎಸ್. ಪಾಟೀಲ, ಆಹಾರ ನಿರೀಕ್ಷಕರಾದ ಎಸ್.ಸಿ. ಅಂಗಡಿ, ಶಿವಪ್ಪ ವನಹಳ್ಳಿ, ಗ್ರಾಮ ಲೆಕ್ಕಾಧಿಕಾರಿ ಬಸವಂತ, ಗ್ರಾಮ ಸಹಾಯಕ ಹನುಮಂತಕುಮಾರ ಹಾಗೂ ಸಿಬ್ಬಂದಿ ದಾಳಿ ತಂಡದಲ್ಲಿದ್ದರು.