ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣಾ ಕಣದಲ್ಲಿ ಅಂತಿಮವಾಗಿ 40 ಅಭ್ಯರ್ಥಿಗಳು ಉಳಿದಿದ್ದಾರೆ. ರಾಜ್ಯ ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ಅ.28ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 5 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ವಿ.ಸಂಕನೂರ, ಕಾಂಗ್ರೆಸ್ನಿಂದ ಆರ್.ಎಂ.ಕುಬೇರಪ್ಪ, ಜೆಡಿಎಸ್ನಿಂದ ಶಿವಶಂಕರ್ ಸಿ.ತಲ್ಲೂರ್ ಸೇರಿ 19 ಮಂದಿ ನಾಮಪತ್ರ ಸಲ್ಲಿಸಿದ್ದರು. 8 ಮಂದಿ ನಾಮಪತ್ರ ತಿರಸ್ಕೃತಗೊಂಡಿದ್ದು, 11 ಮಂದಿ ಕಣದಲ್ಲಿ ಉಳಿದಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಿದಾನಂದ ಎಂ., ಜೆಡಿಎಸ್ನಿಂದ ಆರ್.ಚೌಡರೆಡ್ಡಿ, ಕಾಂಗ್ರೆಸ್ನಿಂದ ರಮೇಶ್ಬಾಬು ಒಗೊಂಡಂತೆ 18 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 3 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 15 ಮಂದಿ ಕಣದಲ್ಲಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪುಟ್ಟಣ್ಣ, ಕಾಂಗ್ರೆಸ್ನಿಂದ ಪ್ರವೀಣ್ ಕುಮಾರ್ ಆರ್ ಹಾಗೂ ಜೆಡಿಎಸ್ನಿಂದ ಎ.ಪಿ.ರಂಗನಾಥ್ ಸೇರಿ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಇಬ್ಬರು ನಾಮಪತ್ರ ಹಿಂಪಡೆದಿದ್ದು, 9 ಮಂದಿ ಕಣದಲ್ಲಿ ಉಳಿದಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8 ಮಂದಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಂದ ಶಶಿಲ್ ನಮೋಶಿ, ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರು ಹಾಗೂ ಜೆಡಿಎಸ್ನಿಂದ ತಿಮ್ಮಯ್ಯ ಪುರ್ಲೆ ಒಳಗೊಂಡಂತೆ ಅಂತಿಮವಾಗಿ 5 ಮಂದಿ ಕಣದಲ್ಲಿದ್ದಾರೆ.
ಬಿಜೆಪಿ ಬಂಡಾಯ: ಆಗ್ನೇಯ ಪದವೀಧರ ಕ್ಷೇತ್ರ್ರಲ್ಲಿ ಎಚ್.ಎಸ್.ಲೇಪಾಕ್ಷ, ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದು, ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಈ ಇಬ್ಬರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನಗಳು ಫಲ ಕೊಟ್ಟಿಲ್ಲ. ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಇವರು ಕಣದಲ್ಲಿ ಉಳಿದಿರುವುದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮುಳುವಾಗಿದೆ.