ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಒಟ್ಟು ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರ ಇರುವಿಕೆಯ ಖಚಿತ ಮಾಹಿತಿ ಲಭ್ಯವಾದ ಕಾರಣ ರಕ್ಷಣಾ ಪಡೆ, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಿಂಗಮ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಶೋಧ ಕಾರ್ಯ ಆರಂಭಿಸಿತ್ತು. ಶೋಧಕಾರ್ಯ ಮುಂದುವರಿದಂತೆ ಒಂದೆಡೆ ಮನೆಯಿಂದ ಉಗ್ರರು ಭದ್ರತಾ ಪಡೆ ಮೇಲೆ ದಾಳಿ ಆರಂಭಿಸಿದ್ದರು. ಪ್ರತಿದಾಳಿ ನಡೆದ ವೇಳೆ ಇಬ್ಬರು ಉಗ್ರರು ಹತರಾದರು. ಮೃತರನ್ನು ಜಂಗಲ್ಪೋರಾ ದಿವ್ಸರ್ನ ತಾರೀಕ್ ಅಹ್ಮದ್ ಮಿರ್ ಮತ್ತು ಪಾಕ್ ಪ್ರಜೆ ಪಂಜಾಬ್ ಪ್ರಾಂತ್ಯದ ಎ ಕೆಟಗರಿ ಉಗ್ರ ಸಮೀರ್ ಭಾಯ್ ಅಲಿಯಾಸ್ ಉಸ್ಮಾನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: 12ರಂದು ಹೈಕೋರ್ಟ್ಗೆ ಹಾಜರಾಗಬೇಕಿದೆ ಹಾಥರಸ್ ಸಂತ್ರಸ್ತೆಯ ಕುಟುಂಬ
ಈ ಇಬ್ಬರೂ ಉಗ್ರರು ಜೈಷ್ ಏ ಮೊಹಮ್ಮದ್ ಸಂಘಟನೆಯವರು. ಪೊಲೀಸ್ ದಾಖಲೆಗಳ ಪ್ರಕಾರ ಅನೇಕ ಉಗ್ರ ದಾಳಿಗಳ ಸಂಘಟಕರಾಗಿದ್ದರು ಇವರು. ಫುರಾಹ್ ಮಿರ್ಬಜಾರ್ನಲ್ಲಿ ಪೊಲೀಸ್ ಅಧಿಕಾರಿ ಖುರ್ಷಿದ್ ಅಹ್ಮದ್ ಹತ್ಯೆ ಮತ್ತು ಅಖ್ರಾನ್ ಮಿರ್ಬಜಾರ್ನಲ್ಲಿ ಸರಪಂಚ್ ಆರೀಫ್ ಅಹ್ಮದ್ ಮೇಲಿನ ದಾಳಿ ಪ್ರಕರಣದ ಆರೋಪಿಗಳೂ ಆಗಿದ್ದರು. ಸ್ಥಳದಿಂಧ ಎಂ4 ರೈಫಲ್, ಪಿಸ್ತೂಲ್ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಮೇಲೆ ರಾಶಿ ಮಾಡುವಂತಿಲ್ಲ: ತೆರವುಗೊಳಿಸಲು ಹಡಗಲಿ ತಾಲೂಕು ಆಡಳಿತಕ್ಕೆ ನ್ಯಾಯಾಧೀಶರ ನೋಟಿಸ್
ಇದೇ ರೀತಿ, ಪುಲ್ವಾಮಾ ಜಿಲ್ಲೆಯ ದದೂರಾ ಪ್ರದೇಶದಲ್ಲಿನ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರ ವಿವರ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಎರಡು ಎಕೆ ರೈಫಲ್ಗಳನ್ನು ರಕ್ಷಣಾ ಪಡೆ ವಶಪಡಿಸಿಕೊಂಡಿದೆ. (ಏಜೆನ್ಸೀಸ್)
1,200 ಕಿ.ಮೀ. ಚೇಸ್ ಮಾಡಿ ಕರ್ನಾಟಕದಲ್ಲಿ ಅರೆಸ್ಟ್ ಮಾಡಿದ್ರು ಮುಂಬಯಿ ಪೊಲೀಸ್