More

    ಮೀನುಗಾರಿಕಾ ಜೆಟ್ಟಿಗೆ ಗ್ರಹಣ!

    ಶ್ರವಣ್‌ಕುಮಾರ್ ನಾಳ ಮಂಗಳೂರು
    ಕರಾವಳಿ ಭಾಗದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಯೋಜನೆಗೆ ಗ್ರಹಣ ಹಿಡಿದಿದೆ.

    3ನೇ ಹಂತದ ವಿಸ್ತರಣಾ ಕಾಮಗಾರಿಗೆ 57.60 ಕೋಟಿ ರೂ.ಗಳ ಪ್ರಸ್ತಾವನೆಗೆ 2010ರ ಸೆ.20ರಂದು ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರಕಿತ್ತು. ಇದರಲ್ಲಿ ಶೇ.75ರಷ್ಟು ಪಾಲನ್ನು (43.20 ಕೋ.ರೂ) ಕೇಂದ್ರ ಸರ್ಕಾರ ಹಾಗೂ ಶೇ.25 ಪಾಲನ್ನು (14.40 ಕೋ.ರೂ) ರಾಜ್ಯ ಸರ್ಕಾರ ನೀಡುವುದೆಂದು ತೀರ್ಮಾನಿಸಲಾಗಿತ್ತು. 2011-12ರಲ್ಲಿ ಈ ಕಾಮಗಾರಿಯ ಟೆಂಡರ್ ಅನ್ನು ಗುತ್ತಿಗೆದಾರರಿಗೆ ನೀಡಿ, 36 ತಿಂಗಳೊಳಗೆ (2015)ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿತ್ತು. ಕಾಮಗಾರಿ ಪ್ರಗತಿ ಸಂದರ್ಭ, ಸ್ಥಳೀಯ ಮೀನುಗಾರರ ಬೇಡಿಕೆಯಂತೆ ಹಾಗೂ ರಾಜ್ಯಮಟ್ಟದ ನಿರ್ಣಯದಂತೆ ಕಾಮಗಾರಿಯ ದಕ್ಷಿಣ ಭಾಗದ ಜೆಟ್ಟಿಯ ಎತ್ತರವನ್ನು +2.50ಮೀ.ನಿಂದ +3.00ಮೀ.ಗೆ ಎತ್ತರಿಸುವಂತೆ ನಿರ್ಣಯಿಸಲಾಗಿತ್ತು. ಅದರಂತೆ ಅನುಮೋದಿತ ವಿನ್ಯಾಸಗಳಂತೆ ಕಾಮಗಾರಿ ಪೂರ್ಣಗೊಳಿಸಲು ಪರಿಷ್ಕೃತ ಅಂದಾಜುಪಟ್ಟಿಯನ್ನು 98.25 ಕೋ.ರೂ.ಗೆ ತಯಾರಿಸಲಾಗಿತ್ತು. ಬಳಿಕ ಹೊಸ ಪ್ರಸ್ತಾವನೆ ಸೇರಿದಂತೆ ಹತ್ತಾರು ಕಾರಣದಿಂದ ಯೋಜನೆ ಪೂರ್ಣಗೊಳ್ಳಲೇ ಇಲ್ಲ. ಜತೆಗೆ ಆಕ್ಷೇಪಗಳಿದ್ದ ಕಾರಣದಿಂದ ಕೆಲವರು ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ದಾವೆ ಹೂಡಿದ್ದರಿಂದ ಯೋಜನೆ ಬಾಕಿಯಾಗಿದೆ.

    ಮಂಗಳೂರಿನ ಮೀನುಗಾರಿಕಾ ಬಂದರಿನ ಒತ್ತಡ ನಿವಾರಿಸುವ ಉದ್ದೇಶದಿಂದ ಜೆಟ್ಟಿಯ ಪಕ್ಕದಿಂದ ಹೊಗೆಬಜಾರ್ ಭಗತ್‌ಸಿಂಗ್ ರಸ್ತೆ ಕಾಂಕ್ರಿಟೀಕರಣ, ಆವರಣ ಗೋಡೆ, ನೆಲಕ್ಕೆ ಕಾಂಕ್ರಿಟ್ ಹಾಗೂ ಕಾಂಕ್ರಿಟ್ ತೋಡು, ಸುಸಜ್ಜಿತ ಹರಾಜು ಕೇಂದ್ರ, ವಿದ್ಯುಚ್ಚಕ್ತಿ, ಕುಡಿಯುವ ನೀರು, ಶೌಚಗೃಹ, ಡ್ರೆಜ್ಜಿಂಗ್ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಲ್ಲಿ ಪರ್ಸಿನ್, ಟ್ರಾಲ್‌ಬೋಟು ಸೇರಿದಂತೆ ಸುಮಾರು 1500ಕ್ಕೂ ಅಧಿಕ ಬೋಟುಗಳು ಇವೆ. ದಕ್ಕೆಯಲ್ಲಿ ಒಂದು ಸಾಲಿನಲ್ಲಿ ಕ್ರಮಪ್ರಕಾರವಾಗಿ ಹೆಚ್ಚು ಕಡಿಮೆ 350 ಬೋಟುಗಳಿಗೆ ನಿಲ್ಲಲು ಅವಕಾಶವಿದೆ. ಉಳಿದಂತೆ 1250 ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೂ ಒಂದು ಸಮಸ್ಯೆ.

     ತಾಂತ್ರಿಕ ಸಮಸ್ಯೆ ನೆಪದಿಂದ ಕಾಮಗಾರಿ ಬಾಕಿ: ಮಂಗಳೂರು ಬಂದರಿನ ಒಂದನೇ ಹಾಗೂ ಎರಡನೇ ಹಂತದ ಅಭಿವೃದ್ದಿ ಆದರೂ ಕೂಡ, ಬೋಟು ನಿಲುಗಡೆಗೆ ಪರದಾಡುವ ಪರಿಸ್ಥಿತಿ ಮನಗಂಡು ಹಾಗೂ ಇಲ್ಲಿನ ಸ್ಥಳಾವಕಾಶ ಗಂಭೀರ ಸಮಸ್ಯೆಯ ಹಿನ್ನಲೆಯಲ್ಲಿ ಮೀನುಗಾರಿಕೆ ದಕ್ಕೆಯ ತೃತೀಯ ಹಂತದ ವಿಸ್ತರಣೆ ಕೈಗೆತ್ತಿಕೊಂಡು ಕೆಲವು ವರ್ಷವೇ ಸಂದಿವೆ. ಇದರ ಕೆಲವು ಕಾಮಗಾರಿ ನಡೆದರೂ ರಸ್ತೆ, ಕಾಂಕ್ರಿಟ್ ನೆಲಹಾಸು, ಕಂಪೌಂಡ್, ಕುಡಿಯುವ ನೀರು, ಹರಾಜು ಪ್ರಾಂಗಣ ಸಹಿತ ಕೆಲವು ಕಾಮಗಾರಿ ಬಾಕಿಯಾಗಿದೆ. ಇದಕ್ಕಾಗಿ 22 ಕೋ.ರೂ.ಗಳ ಹೆಚ್ಚುವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ಕಳೆದ ವರ್ಷ ದೊರೆತಿದೆ. ಆದರೆ ಜಾಗದ ಸಮಸ್ಯೆ ನ್ಯಾಯಾಲಯದಲ್ಲಿದೆ ಹಾಗೂ ತಾಂತ್ರಿಕ ಸಮಸ್ಯೆ ನೆಪದಿಂದ ಬಾಕಿ ಇರುವ ಕೆಲಸ ಮಾತ್ರ ಇನ್ನೂ ಶುರುವಾಗಿಲ್ಲ.

    ಗಡಿ ಗುರುತು ಇಲ್ಲದೆ ಗೊಂದಲ: ಕಳೆದ ಹಲವು ಸಮಯದಿಂದ ಚರ್ಚೆಗೆ ಕಾರಣವಾಗಿದ್ದ 3ನೇ ಜೆಟ್ಟಿ ಇರುವ ಭೂಮಿ ಬಂದರು ಇಲಾಖೆಗೆ ಸೇರಿದ್ದಾ ಅಥವಾ ಮೀನುಗಾರಿಕಾ ಇಲಾಖೆಯದ್ದಾ ಎಂಬ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಗಡಿ ಗುರುತು ಇಲ್ಲದೆ ಹಲವು ಅವ್ಯವಸ್ಥೆಗೂ ಕಾರಣವಾಗಿತ್ತು. ಹೀಗಾಗಿ ಇದರ ಬಗ್ಗೆ ಗಡಿ ಗುರುತು ಮಾಡಿ ಆ ಬಳಿಕ 3ನೇ ಜೆಟ್ಟಿ ವಿಸ್ತರಣೆಯ ಉಳಿಕೆ ಕಾಮಗಾರಿ ನಡೆಸಲು ದ.ಕ. ಜಿಲ್ಲಾಡಳಿತ ನಿರ್ಧರಿಸಿತ್ತು.

    ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣದ ಬಾಕಿಯಾಗಿರುವ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಬಳಿಕ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವೊಂದು ತಾಂತ್ರಿಕ ಸವಾಲು ಎದುರಾದ ಕಾರಣದಿಂದ ಸಮಸ್ಯೆ ಆಗಿತ್ತು. ಅದು ಇತ್ಯರ್ಥವಾದ ಕೂಡಲೇ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ.
    – ಎಸ್ ಅಂಗಾರ, ಸಚಿವ ಮೀನುಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts