ಬೆಳಗಾವಿ: ಕಳ್ಳಭಟ್ಟಿ ಸಾರಾಯಿ ಮಾರಾಟ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ಓರ್ವನನ್ನು ಶನಿವಾರ ಬಂಧಿಸಿದ್ದಾರೆ. ಅಲ್ಲದೆ, ಆತನ ಬಳಿಯಿದ್ದ 336.93 ಲೀಟರ್ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಈರಪ್ಪ ಯಲ್ಲಪ್ಪ ಗೊರವ ಬಂಧಿತ ವ್ಯಕ್ತಿ. ಯಮಕನಮರಡಿ ಗ್ರಾಮದಲ್ಲಿರುವ ಮನೆಯೊಂದರಲ್ಲಿ 30 ಲೀ. ಸಾಮರ್ಥ್ಯದ 8 ರಬ್ಬರ್ ಟ್ಯೂಬ್ಗಳಲ್ಲಿ 240 ಲೀ. ಕಳ್ಳಬಟ್ಟಿ ಸಾರಾಯಿ, ವಿವಿಧ ನಮೂನೆಯ ಒಟ್ಟು 91.980 ಲೀ. ಮದ್ಯ ಹಾಗೂ 4.950 ಲೀ. ಬಿಯರ್ ಬಾಟಲ್ ವಶಪಡಿಸಿಕೊಳ್ಳಲಾಗಿದೆ. ದಾಳಿಯ ವೇಳೆ ತಪ್ಪಿಸಿಕೊಂಡಿರುವವರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಚಿಕ್ಕೋಡಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ವಿಜಯ ಹಿರೇಮಠ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಪ್ರವೀಣ ರಂಗಸೊಬೆ, ಶ್ರೀಶೈಲ ಗೂಡುಮೆ, ಮಹಾಬಲ ಹೂಗಾರ, ಎಸ್.ಮಂಜುನಾಥ, ಎಂ.ಸೈಯದ್ ಹಾಗೂ ಸಿಬ್ಬಂದಿ ಇದ್ದರು.
ಎಂಟು ಜನರ ಬಂಧನ: ಹಿರೇಬಾಗೇವಾಡಿ ಸಮೀಪದ ಕೊಂಡಸಕೊಪ್ಪ ಗ್ರಾಮದ ನಂದಿ ಹಿಲ್ಸ್ ಬಳಿ ಕರೊನಾ ಮಾರ್ಗಸೂಚಿ ಉಲ್ಲಂಸಿ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಧಾಮನೆ ಗ್ರಾಮದ ಚಂಗಪ್ಪ ಗುರುನಾಥ ಜಾಲಚ (37), ತಾನಾಜಿ ಮನೋಹರ ಜಾಲಚ (34), ಮಂಜುನಾಥ ಭುಜಬಲಿ ಹನುಮಗೌಡ (36), ಕೃಷ್ಣ ಮಲ್ಲಪ್ಪ ಲಾಡ್ (33), ಮಂಜುನಾಥ ಗೋಪಾಲ ಪಾಟೀಲ (29), ಸುನೀಲ ಯಲ್ಲಪ್ಪ ಸುಣಗಾರ (37), ಸಂತೋಷ ಹನುಮಂತ ತಾರೀಹಾಳಕರ (35), ಜ್ಯೋತಿಬಾ ಧಾಮು ಭಾಸ್ಕರ (55) ಬಂಧಿತರು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.