More

    ನಾಡದೋಣಿ ಮೀನುಗಾರರಿಗೆ 300 ಲೀ. ಸೀಮೆಎಣ್ಣೆ

    ಭಟ್ಕಳ: ರಾಜ್ಯ ಮೀನುಗಾರಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿಗದಿತ ಸಮಯದಲ್ಲಿ, ರಿಯಾಯಿತಿ ದರದಲ್ಲಿ ಸಾಂಪ್ರದಾಯಿಕ ಮೋಟರೀಕೃತ ನಾಡದೋಣಿ ಮೀನುಗಾರರಿಗೆ ಕೈಗಾರಿಕಾ ಸೀಮೆಎಣ್ಣೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಮೀನುಗಾರಿಕಾ ಮತ್ತು ಬಂದರು ಒಳನಾಡು ಸಚಿವ ಮಂಕಾಳ ವೈದ್ಯ ಹೇಳಿದರು.

    ಸಮೀಪದ ತೆಂಗಿನಗುಂಡಿ ಮೀನುಗಾರಿಕಾ ಬಂದರಿನಲ್ಲಿ ಸೋಮವಾರ ಆಯೋಜಿಸಿದ್ದ ರಿಯಾಯಿತಿ ದರದಲ್ಲಿ ಸಾಂಪ್ರದಾಯಿಕ ಮೋಟರೀಕೃತ ನಾಡದೋಣಿ ಮೀನುಗಾರರಿಗೆ ಕೈಗಾರಿಕಾ ಸೀಮೆಎಣ್ಣೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀನುಗಾರರಿಗೆ ಸೀಮೆಎಣ್ಣೆ ನೀಡದೆ ಸಂಕಷ್ಟಕ್ಕೆ ದೂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕರಾವಳಿಯ ಎಲ್ಲ ನಾಡದೋಣಿ ಮೀನುಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೀಮೆಎಣ್ಣೆ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ ಎಂದರು.

    ಪ್ರತಿ ನಾಡದೋಣಿ ಮೀನುಗಾರರಿಗೆ ತಿಂಗಳಿಗೆ 300 ಲೀಟರ್ ಕೈಗಾರಿಕಾ ಸೀಮೆಎಣ್ಣೆ ದೊರೆಯಲಿದೆ. ರಾಜ್ಯ ಸರ್ಕಾರ ಲೀಟರ್‌ಗೆ 92 ರೂಪಾಯಿಯಂತೆ ಖರೀದಿಸಿ ಮೀನುಗಾರರಿಗೆ 57 ರೂಪಾಯಿಗೆ ನೀಡುತ್ತಿದೆ. ರಾಜ್ಯ ಸರ್ಕಾರ 35 ರೂಪಾಯಿ ಸಹಾಯಧನವನ್ನು ಮೀನುಗಾರರಿಗೆ ನೀಡುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರಕ್ಕೆ ಮೀನುಗಾರರ ಹಿತ ಕಾಪಾಡುವ ಇಚ್ಛೆ ಇದ್ದರೆ ಮತ್ತಷ್ಟು ದರದಲ್ಲಿ ರಿಯಾಯಿತಿ ದೊರಕುತ್ತದೆ ಎಂದರು.

    ಕೈಗಾರಿಕಾ ಸೀಮೆಎಣ್ಣೆಯನ್ನು ದೇಶದಲ್ಲೇ ಮೊದಲ ಬಾರಿಗೆ ನೀಡಿದ ಸರ್ಕಾರ ನಮ್ಮದು. ಹೇಳಿದ ಗ್ಯಾರಂಟಿಗಳನ್ನು ಚಾಚು ತಪ್ಪದೆ ಈಡೇರಿಸಿದ್ದೇವೆ. ಕಳೆದ ಬಾರಿಯ ಮೀನುಗಾರಿಕೆ ಇಲಾಖೆಯಿಂದ ಸಾಕಷ್ಟು ಅನುದಾನ ತಂದರೂ ನಂತರ ಬಂದ ಶಾಸಕ ಅದನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

    ಮೀನುಗಾರರ ಮುಖಂಡ ಸೋಮನಾಥ ಮೊಗೇರ ಮಾತನಾಡಿ, ಸಾಂಪ್ರದಾಯಕ ಮೀನುಗಾರರು ಹಿಂದುಳಿದಿದ್ದಾರೆ. ಸೀಮೆಎಣ್ಣೆಗೆ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಕೇಂದ್ರದ ತನಕವೂ ನಿಗಮದ ಮೂಲಕ ಮನವಿ ನೀಡಿದ್ದೇವೆ. ಕಳೆದ ವರ್ಷ ಸೆಪ್ಟೆಂಬರ್ ಅವಧಿಯಲ್ಲಿ ಬರಬೇಕಾಗಿತ್ತು. ಆದರೆ, ಬಂದಿಲ್ಲ. ಇದರಿಂದ ಮೀನುಗಾರಿಕೆ ಕಷ್ಟಸಾಧ್ಯವಾಗಿತ್ತು. ಸಚಿವರು ಹೊಸ ಸಾಹಸಕ್ಕೆ ಕೈಹಾಕಿ ಮೀನುಗಾರರನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ ಎಂದರು.

    ಮೀನುಗಾರಿಕಾ ಸಹಕಾರಿ ಸಂಘ ಜಾಮೀಯಾಬಾದ್ ಹಾಗೂ ಮೀನುಗಾರಿಕಾ ವಿವಿಧ ಸಂಘ ಸಂಸ್ಥೆಗಳು ಮತ್ತು ಮೀನುಗಾರರಿಂದ ಸಚಿವ ಮಂಕಾಳ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಮಹೇಶ ಕುಮಾರ, ಕೇಶವ ಗೋವಿಂದ ಮೊಗೇರ, ವಿಠ್ಠಲ ದೈಮನೆ, ಜಟ್ಕಾ ದುರ್ಗಪ್ಪ ಮೊಗೇರ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts