ನವದೆಹಲಿ: ನೇಣುಗಂಬಕ್ಕೆ ಏರಲು ಇನ್ನೇನು ನಾಲ್ಕೇ ದಿನ ಬಾಕಿ ಇದೆ ಎನ್ನುವಾಗ ನಿರ್ಭಯಾ ಅತ್ಯಾಚಾರ ಅಪರಾಧಿಗಳು ಮತ್ತೆ ಫುಲ್ ಅಲರ್ಟ್ ಆಗಿದ್ದಾರೆ.
ಈ ಹಿಂದೆ ನನಗೆ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದ ವಕೀಲರಾದ ವೃಂದಾ ಅವರು ನನ್ನ ದಾರಿ ತಪ್ಪಿಸಿದ್ದಾರೆ. ಹಾಗಾಗಿ ಈಗ ಹೊಸದಾಗಿ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಮನವಿಯನ್ನು ಇಂದು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಮುಕೇಶ್ ಸಿಂಗ್ ಅರ್ಜಿಗೆ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ ಬೆನ್ನಲ್ಲೇ, ಉಳಿದ ಮೂವರು ಅಪರಾಧಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ದೆಹಲಿ ಪಟಿಯಾಲಾ ಕೋರ್ಟ್, ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿದಿದ್ದರಿಂದ ಮರಣದಂಡನೆ ತಪ್ಪಿಸಿಕೊಳ್ಳಲು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಅಪರಾಧಿಗಳಾದ ಅಕ್ಷಯ್ ಸಿಂಗ್, ವಿನಯ್ ಶರ್ಮಾ ಹಾಗೂ ಪವನ್ ಗುಪ್ತಾ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ತಮ್ಮ ಗಲ್ಲುಶಿಕ್ಷೆಗೆ ತಡೆನೀಡಬೇಕು ಎಂದು ಮನವಿ ಮಾಡಿದ್ದಾರೆ. ತಮಗೆ ವಿಧಿಸಿದ ಮರಣದಂಡನೆ ತೀರ ಅಮಾನವೀಯ ಮತ್ತು ಕ್ರೂರ ಶಿಕ್ಷೆಯಾಗಿದೆ. ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ಸರಿಯಾಗಿ ಪುರಾವೆಯೇ ಇಲ್ಲದಿದ್ದರೂ ನಮ್ಮನ್ನು ಅಪರಾಧಿಗಳು ಎಂದು ಬಿಂಬಿಸಲಾಗಿದೆ. ಸಂತ್ರಸ್ತೆ ನೀಡಿದ ಹೇಳಿಕೆಗಳು, ಡೈಯಿಂಗ್ ಡಿಕ್ಲೇರೇಶನ್ಗಳ ಪರಿಶೀಲನೆಯನ್ನು ಸರಿಯಾಗಿ ಮಾಡಿಲ್ಲ. ಹಾಗಾಗಿ ನಮಗೆ ಗಲ್ಲುಶಿಕ್ಷೆ ನೀಡಬಾರದು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾ.20ರಂದು ಮುಂಜಾನೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಡೆತ್ವಾರೆಂಟ್ ಜಾರಿಯಾಗಿದೆ. ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. (ಏಜೆನ್ಸೀಸ್)