ಬೆಂಗಳೂರು : 2,800 ಕೋಟಿ ರೂ.ಗಿಂತ ಅಧಿಕ ಮೊತ್ತದ ಬಿಲ್ ಪಾವತಿಸದ ಬಿಬಿಎಂಪಿ ವಿರುದ್ಧ ಕಾರ್ಯನಿರತ ಗುತ್ತಿಗೆದಾರ ಸಂಘದ ಸದಸ್ಯರು ಸೋಮವಾರ ಪಾಲಿಕೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರದ ಯಾವುದೇ ಇಲಾಖೆಗಳ ಗುತ್ತಿಗೆ ಕಾರ್ಯಕ್ಕೆ ಗರಿಷ್ಠ 1 ವರ್ಷದೊಳಗೆ ಬಿಲ್ ಪಾವತಿ ಮಾಡಲಾಗುತ್ತಿದೆ. ಆದರೆ, ಬಿಬಿಎಂಪಿ ನೀಡಿದ್ದ ಕಾಮಗಾರಿಗಳನ್ನು ನಿಗದಿತ ಅವಧಿಗೆ ಪೂರ್ಣಗೊಳಿಸಿ 2 ವರ್ಷ ಕಳೆದರೂ ಬಿಲ್ ಪಾವತಿ ಮಾಡುತ್ತಿಲ್ಲ. ಬಿಲ್ ಪಾವತಿಗೆ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದು, ಲಂಚ ನೀಡಿದವರಿಗೆ ಮಾತ್ರ ಬಿಲ್ ಪಾವತಿಸುತ್ತಿದ್ದಾರೆ. ಬಿಲ್ ಪಾವತಿಗೆ ಜ್ಯೇಷ್ಠತೆ ಇದ್ದರೂ ನೀಡದೇ ಭ್ರಷ್ಟಾಚಾರ ಎಸಗಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೆ 2 ಸಾವಿರ ಗುತ್ತಿಗೆದಾರರಿಗೆ ಹಣ ಪಾವತಿ ಬಾಕಿಯಿದೆ. ಕರೊನಾ ಸಂದರ್ಭ ಸೇರಿ ಶೇ.50 ಗುತ್ತಿಗೆದಾರರು ಸಾಲ ಮಾಡಿ ಅದನ್ನು ಮರು ಪಾವತಿಸಲಾಗದೆ ಮನೆ ಮತ್ತು ಇತರೆ ಆಸ್ತಿಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ವಣವಾಗಿದೆ. ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಸರಾ ಹಬ್ಬದಲ್ಲೂ ಗುತ್ತಿಗೆದಾರರಿಗೆ ಒಂದು ರೂಪಾಯಿಯನ್ನೂ ನೀಡಿಲ್ಲ. ಸಂಕಷ್ಟದಲ್ಲಿರುವ ತಮಗೆ ಕೂಡಲೆ ಮಾರ್ಚ್-2020ರವರೆಗಿನ ಎಲ್ಲ ಕಾಮಗಾರಿಗಳ ಬಿಲ್ಗಳನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮನ್ಸೂರ್ ಜತೆ ಬೇಗ್ ಅಕ್ರಮ ಅವ್ಯವಹಾರ – ಕಂದಾಯ ಇಲಾಖೆಗೆ ಸಕ್ಷಮ ಪ್ರಾಧಿಕಾರದ ತನಿಖಾಧಿಕಾರಿ ಪತ್ರ
ರಸ್ತೆ ಬಂದ್ ಮಾಡುವ ಎಚ್ಚರಿಕೆ: ಬಿಲ್ ಬಾಕಿ ಬಿಡುಗಡೆ ಮಾಡುವಂತೆ ಈಗಾಗಲೇ ನಾಲ್ಕೈದು ಬಾರಿ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ನಗರದ 500ಕ್ಕೂ ಹೆಚ್ಚು ಪ್ರಗತಿಯಲ್ಲಿದ್ದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಈಗ ಪ್ರತಿಭಟನೆ ಮಾಡುತ್ತಿದ್ದು, ಮುಂದೆಯೂ ವಿಳಂಬ ಮಾಡಿದಲ್ಲಿ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು. ಅಲ್ಲದೆ, ರಸ್ತೆ ಬಂದ್ ಮೂಲಕ ಉಗ್ರ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಜೀವಸಾರ್ಥಕತೆ ಪೋರ್ಟಲ್ನಲ್ಲಿ ನೇತ್ರದಾನ ಮಾಡಿ – ಅವಕಾಶ ಕಲ್ಪಿಸಿದ ಆರೋಗ್ಯ ಇಲಾಖೆ