ಪಿರಿಯಾಪಟ್ಟಣ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಶಕೀಲಾಬಾನು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ.ಪಿ.ಕಾವೇರಮ್ಮ ಮಾತನಾಡಿ, ಕರೊನಾ ಸೋಂಕಿತ ಅಂಗನವಾಡಿ ಕಾರ್ಯಕರ್ತೆಯರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು, ಈಗಲಾದರೂ ಕೆಲಸದ ಮಹತ್ವ ಅರಿತು ನೌಕರರನ್ನು ಕಾಯಂ ಮಾಡಬೇಕು, ಕರೊನಾ ಸಮಯದಲ್ಲಿ ದುಡಿಯುತ್ತಿರುವರಿಗೆ 25 ಸಾವಿರ ರೂ. ಪ್ರೊತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದರೆ ಅಸಹಕಾರ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪದಾಧಿಕಾರಿಗಳಾದ ಬಿ.ಸಿ.ಶಾರದಮ್ಮ, ಕೆ.ಕೆ.ಶೋಭನಾ, ಎಸ್.ಎ.ರಾಣಿ , ಗಿರಿಜಮ್ಮ, ಮಂಜುಳಾ, ಮತ್ತಿತರರು ಹಾಜರಿದ್ದರು.