ಮೈಸೂರು: ಅನೇಕ ಯುವ ಮನಸ್ಸುಗಳನ್ನು ಕಟ್ಟಿಕೊಂಡು ಸದಾ ಹೊಸ ವಿಷಯದೊಂದಿಗೆ ಒಡನಾಡುವ ನಿರಂತರ ಫೌಂಡೇಶನ್ ಮಾ.24ರಿಂದ 28ರವರೆಗೆ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ‘ನಿರಂತರ ರಂಗ ಉತ್ಸವ-2020-21’ ಆಯೋಜಿಸಿದೆ.
ಭಾರತೀಯ ಕಲಾ ಪರಂಪರೆಯಲ್ಲಿ ರಂಗಭೂಮಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಜನರ ನೋವು-ನಲಿವು, ದುಃಖ-ದುಮ್ಮಾನ, ಸಿಟ್ಟು-ಸೆಡವು ಎಲ್ಲವುಗಳ ನೇರ ಅಭಿವ್ಯಕ್ತಿ ರಂಗಭೂಮಿಯಲ್ಲಿ ಸಾಧ್ಯ. ಅಂತೆಯೇ ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ನೇರ ಮುಖಾಮುಖಿ ಈ ರಂಗಭೂಮಿ. ನಿರಂತರ ರಂಗ ಉತ್ಸವ ಇಂಥ ಸಾಧ್ಯತೆಗಳ ವಿಸ್ತರಣೆಯಾಗಿ ಹೊರಹೊಮ್ಮಿದೆ. ಇದೊಂದು ರಾಷ್ಟ್ರಮಟ್ಟದ ರಂಗ ಉತ್ಸವ ಎಂದು ಫೌಂಡೇಶನ್ ಅಧ್ಯಕ್ಷ ಎಂ.ಎಂ. ಸುಗುಣ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.24 ರಂದು ಸಂಜೆ 6.15ಕ್ಕೆ ರಂಗ ಉತ್ಸವದ ಉದ್ಘಾಟನೆ ನೆರವೇರಲಿದ್ದು, ಹಿರಿಯ ಸಮಾಜವಾದಿ ಪ.ಮಲ್ಲೇಶ್, ಮುಡಾ ಆಯುಕ್ತ ಡಾ.ನಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ಸಂಜೆ 7ಕ್ಕೆ ನಿರಂತರ ಮೈಸೂರು ತಂಡದಿಂದ ಬಸವಣ್ಣನ ವಚನಗಳನ್ನಾಧರಿಸಿದ ದೃಶ್ಯರೂಪಕ ‘ಕೂಡಲಸಂಗಮ’ ಪ್ರಸ್ತುತಗೊಳ್ಳಲಿದೆ. ಮಾ.25ರಂದು ಸಂಜೆ 7ಕ್ಕೆ ರೋಹಿತ್ ಆರ್.ಬೈಕಾಡಿ ನಿರ್ದೇಶನದಲ್ಲಿ ಉಡುಪಿಯ ಕೋಶಿಕಾ ತಂಡವು ‘ಕುದುರೆ ಬಂತು ಕುದುರೆ’ ನಾಟಕ ಪ್ರದರ್ಶನ ಮಾಡಲಿದೆ. ಮಾ.26ರಂದು ಸಂಜೆ 7ಕ್ಕೆ ಜೀವನ್ ಕುಮಾರ್ ಹೆಗ್ಗೋಡು ನಿರ್ದೇಶನದಲ್ಲಿ ರಂಗಾಯಣ ಮೈಸೂರು ತಂಡವು ‘ಸೀತಾ ಸ್ವಯಂವರ’ ನಾಟಕವನ್ನು ಸಾದರಡಿಸಲಿದೆ. ಮಾ.27ರಂದು ಸಂಜೆ 7ಕ್ಕೆ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ತಂಡವು ವೆಂಕಟೇಶ್ ಪ್ರಸಾದ್ ನಿರ್ದೇಶನದಲ್ಲಿ ‘ಕೋವಿಗೊಂದು ಕನ್ನಡಕ’ ನಾಟಕವನ್ನು ಪ್ರದರ್ಶಿಸುವರು.
ಮಾ.28ರಂದು ಸಂಜೆ 6.15ಕ್ಕೆ ರಂಗ ಉತ್ಸವದ ಸಮಾರೋಪದಲ್ಲಿ ಚೆನ್ನೈನ ಆದಾಯ ತೆರಿಗೆ ಆಯುಕ್ತ ಜಯರಾಮ್ ರಾಯಪುರ, ನಗರ ಪೊಲೀಸ್ ಉಪ ಆಯುಕ್ತ ಡಾ.ಎ.ಎನ್.ಪ್ರಕಾಶ್ ಗೌಡ, ರಂಗ ಗೆಳೆಯ ಜಯರಾಮ್ ಪಾಟೀಲ್ ಭಾಗವಹಿಸುವರು. ನಂತರ ಸಂಜೆ 7ಕ್ಕೆ ಬೆಂಗಳೂರಿನ ಸಮಷ್ಠಿ ತಂಡವು ಮಂಜುನಾಥ್ ಎಲ್.ಬಡಿಗೇರ ನಿರ್ದೇಶನದಲ್ಲಿ ‘ಕಂತು’ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದರು.
ಇದೇ ವೇಳೆ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು. ಛಾಯಾಗ್ರಾಹಕ ನೇತ್ರರಾಜು, ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್.ಪ್ರಸಾದ್, ಟ್ರಸ್ಟಿ ಶ್ರೀನಿವಾಸ್ ಇದ್ದರು.
–0–