ಚಿತ್ರದುರ್ಗ: ಶರಣರ ತತ್ವಗಳನ್ನು ಸಾರುವ ನಿಟ್ಟಿನಲ್ಲಿ ಜ.21 ರಂದು ಬೆಳಗ್ಗೆ 11 ಗಂಟೆಗೆ ಡಿಸಿ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಸವಣ್ಣನ ಸಮಕಾಲೀನ ಶರಣ ತತ್ವವನ್ನು ಸಂಪೂರ್ಣವಾಗಿ ಪಾಲಿಸಿ, ನಿಜಶರಣ ಎಂಬ ಬಿರುದನ್ನು ಅಂಬಿಗರ ಚೌಡಯ್ಯ ಪಡೆದಿದ್ದರು. ಇಂತಹ ಮಹನೀಯರ ಜೀವನ ಚರಿತ್ರೆ, ವಚನಗಳು ಹಾಗೂ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ರಂಗಪ್ಪ ಮಾತನಾಡಿ, ರಾಜ್ಯದಲ್ಲಿ ಬರಗಾಲ ಇರುವುದರಿಂದ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸಂಗೀತ ಹಾಗೂ ಉಪನ್ಯಾಸ ಏರ್ಪಡಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಹೇಳಿದರು.
ಸಮಾಜದ ಮುಖಂಡರಾದ ಕೃಷ್ಣಮೂರ್ತಿ, ಶ್ರೀನಿವಾಸ್, ಕೆಂಚಪ್ಪ, ಬಿ.ಹನುಮಂತಪ್ಪ, ಮೂರ್ತಿ, ಆರ್.ಪ್ರಕಾಶ್, ಶಿವಕುಮಾರ್,ನಗರಸಭೆ ಮಾಜಿ ಸದಸ್ಯ ಜೆ.ಮಹೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಶಿಕ್ಷಣ ಇಲಾಖೆಯ ಚಿದಾನಂದ ಮತ್ತಿತರರು ಇದ್ದರು.