ಆನಂದಪುರ: ಸಮೀಪದ ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯದ ಮತ್ತು ಪರಿವಾರ ದೇವಾಲಯಗಳ ಆವರಣದಲ್ಲಿ ನ.21 ಮತ್ತು 22ರಂದು ಎರಡು ದಿನಗಳ ಕಾಲದ ಹೊಸಗುಂದ ಉತ್ಸವ ಆಯೋಜಿಸಲಾಗಿದೆ. ಈ ನಿಮಿತ್ತ ವಿವಿಧ ಧಾರ್ಮಿಕ ಕೈಂಕರ್ಯಗಳು ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಏರ್ಪಡಿಸಲಾಗಿದೆ. ಹೊಸಗುಂದದ ಉಮಾಮಹೇಶ್ವರ ದೇವಾಲಯ, ಪರಿವಾರ ದೇವಾಲಯಗಳಾದ ಮಹಿಷ ಮರ್ದಿನಿ, ವೀರಭದ್ರ, ಗಣಪತಿ, ಸುಬ್ರಹ್ಮಣ್ಯ, ದ್ರಾವಿಡ ಶೈಲಿಯ ಶ್ರೀ ಲಕ್ಷ್ಮೀ ಗಣಪತಿ ದೇವಾಲಯ, ಕೇರಳ ಶೈಲಿಯ ಭದ್ರಕಾಳಿ ದೇವಾಲಯ ಸೇರಿ ಎಲ್ಲ ದೇಗುಲದಲ್ಲಿ ವಿಶೇಷ ಪೂಜೆ, ದೀಪಾಲಂಕಾರ, ದೀಪೋತ್ಸವ ನಡೆಯಲಿದೆ. ನ.21ರ ಸಂಜೆ 5.30 ಕ್ಕೆ ಸಾಗರದ ಸದ್ಗುರು ಭಜನಾ ಮಂಡಳಿಯಿಂದ ಭಜನೆ ಸೇವೆ, ನಿರ್ಮಲಾ ಸುರೇಶ ಮತ್ತು ಜತೆಗಾರರಿಂದ ಶ್ರೀರಾಮ ನೃತ್ಯ ಸೇವೆ, ಸಾಗರದ ಕಲಾ ಸಿಂಚನ ಸಾಂಸ್ಕೃತಿಕ ವೇದಿಕೆಯಿಂದ ಜಾನಪದ ಸಮೂಹ ಗಾಯನ ಸೇವೆ, ಪ್ರಣಮ್ಯಾ ಜಂಬೆಕೊಪ್ಪಳಿಂದ ಭರತ ನಾಟ್ಯ ಸೇವೆ, ಜಯಂತಿ ಹೆಗಡೆ ಮತ್ತು ಸಂಗಡಿಗರಿಂದ ಅಂಟಿಕೆ ಪಿಂಟಿಕೆ ಜಾನಪದ ಕಲಾ ಸೇವೆ ನಡೆಯಲಿದೆ. ನ.22ರ ಸಂಜೆ 6ಕ್ಕೆ ಲಕ್ಷ ದೀಪೋತ್ಸವ, ರಾತ್ರಿ 8ಕ್ಕೆ ಅನನ್ಯ ಅಶ್ವತ್ಥ ಹೆಗಡೆ ನೃತ್ಯ ಸೇವೆ ಪ್ರದರ್ಶನ ನೀಡಲಿದ್ದಾರೆ. ರಾತ್ರಿ 9.30ರಿಂದ ಹಾರೇಕೊಪ್ಪದ ಮಾರಿಕಾಂಬಾ ಯಕ್ಷಗಾನ ಮಂಡಳಿಯಿಂದ ಕಂಸ ವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.