ಕುಮಟಾ: ಬಹುನಿರೀಕ್ಷಿತ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದ್ದು 2021ರ ಅಂತ್ಯದೊಳಗೆ ಸುಸಜ್ಜಿತ ಮೂರು ಮಹಡಿಯ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಅವರು ಶುಕ್ರವಾರ ಮಿನಿವಿಧಾನಸೌಧ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದೆ 2018ರಲ್ಲಿ ನಾನು ಶಾಸಕನಾಗಿ ಬಂದ ಬೆನ್ನಲ್ಲೇ ಮಿನಿ ವಿಧಾನಸೌಧಕ್ಕೆ ಬೇಕಾದ ಹಣಕಾಸಿಗೆ ಅಂದಿನ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸಹಕಾರದಿಂದ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಪಡೆದಿದ್ದೆ. ಕಾಮಗಾರಿಗೆ 10 ಕೋಟಿ ರೂ. ಟೆಂಡರ್ ಕರೆದು, 2019ರ ಜನವರಿಯಲ್ಲಿ ಸಚಿವ ಆರ್. ಅಶೋಕ ಶಿಲಾನ್ಯಾಸ ನೆರವೇರಿಸಿದ್ದರು. ಬಳಿಕ ಕರೊನಾ ಕಾರಣದಿಂದ ಕಾಮಗಾರಿಗೆ ಮೂರ್ನಾಲ್ಕು ತಿಂಗಳು ಅಡ್ಡಿಯಾಯಿತು. ಆದರೂ ಬಳಿಕ ಅತ್ಯಂತ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಿನಿವಿಧಾನಸೌಧದ ಮೂರನೇ ಮಹಡಿ ನಿರ್ವಣಕ್ಕೆ ಬೇಕಾದ ಹಣಕಾಸಿನ ಮಂಜೂರಾತಿಯನ್ನು ಪಡೆಯಲಿದ್ದೇನೆ ಎಂದರು.
ಪಿಡಬ್ಲು್ಯಡಿ ಇಂಜಿನಿಯರ್ ಶಶಿಕಾಂತ ಕೊಳೆಕರ ವಿಜಯವಾಣಿಗೆ ಮಾಹಿತಿ ನೀಡಿ, ನಿರ್ಧರಿತ ಮಿನಿ ವಿಧಾನಸೌಧ ಕಟ್ಟಡ ಪೂರ್ತಿಗೆ ಒಟ್ಟು 16 ಕೋಟಿ ರೂ. ಬೇಕು. ಪ್ರೌಡ್ ಇಂಡಿಯಾ ಪ್ರಮೋಟರ್ಸ್ ಕಂಪನಿ ಕಾಮಗಾರಿ ನಡೆಸುತ್ತಿದೆ. ಮಿನಿ ವಿಧಾನಸೌಧದ ನೆಲ ಅಂತಸ್ತಿನಲ್ಲಿ ಕಂದಾಯ ಇಲಾಖೆ, ಎರಡನೇ ಹಂತದಲ್ಲಿ ಸರ್ವೆ, ಕಂದಾಯ ಹಾಗೂ ಉಪವಿಭಾಗಾಧಿಕಾರಿ ಕಾರ್ಯಾಲಯ ಮುಂತಾದವು ಹಾಗೂ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಇತರ ಸರ್ಕಾರಿ ಇಲಾಖೆ ಕಾರ್ಯಾಲಯಗಳಿಗೆ ಕೊಠಡಿ ನಿರ್ಧರಿಸಿ ವಿನ್ಯಾಸ ಮಾಡಲಾಗಿದೆ ಎಂದರು.
ಗುತ್ತಿಗೆದಾರ ಉದಯ ಶೆಟ್ಟಿ, ಪ್ರಕಾಶ ಶೆಟ್ಟಿ, ಪುರಸಭೆ ಸದಸ್ಯ ಸಂತೋಷ ನಾಯ್ಕ, ಶಾಸಕರ ಸಹಾಯಕ ಅಧಿಕಾರಿ ಅಶೋಕ ಭಟ್ ಇದ್ದರು.