ವಿಜಯಪುರ: ರಾಜ್ಯಾದ್ಯಂತ ಆರು ಸಾವಿರ ಸೌಹಾರ್ದ ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ ಎಂದು ಬ್ಯಾಂಕ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ತಿಳಿಸಿದರು.
ಮಂಗಳವಾರ ಇಂಡಿ ಶಾಖೆಯ 18ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಅವರು ಮಾತನಾಡಿ, ಸಮಸ್ತ ಇಂಡಿ ಭಾಗದ ಜನತೆ ಸಿದ್ಧಸಿರಿ ಮೇಲೆ ವಿಶ್ವಾಸವಿಟ್ಟು ಇಂಡಿ ವಲಯದಲ್ಲಿರುವ ಒಟ್ಟು 15 ಶಾಖೆಗಳಲ್ಲಿ 160 ಕೋಟಿ ರೂ. ಠೇವಣಿ ಇರಿಸಿದ್ದಾರೆ ಎಂದರು.
ಕಳೆದ 18 ವರ್ಷಗಳಲ್ಲಿ ಬ್ಯಾಂಕ್ ರಾಜ್ಯಾದ್ಯಂತ 153 ಶಾಖೆಗಳನ್ನು ಹೊಂದಿದ್ದು, ಎರಡೂವರೆ ಸಾವಿರ ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಶೇರುದಾರರಿಗೆ ಶೇ. 25ರಷ್ಟು ಡಿವಿಡೆಂಟ್ ನೀಡಿದ್ದು, ಗ್ರಾಹಕರ ವಿಶ್ವಾಸ ಇಮ್ಮಡಿಗೊಳಿಸಿದೆ. ಅಷ್ಟೇ ಅಲ್ಲ ರಾಜ್ಯಾದ್ಯಂತ 1500ಕ್ಕೂ ಅಧಿಕ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸಿದ್ದು, ಸಾವಿರಾರು ಕುಟುಂಬಗಳಿಗೆ ಆಶ್ರಯ ಒದಗಿಸಿದೆ ಎಂದು ಹೇಳಿದರು.
ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯ, ಆರ್.ಟಿ.ಜಿ.ಎಸ್, ನೆಫ್ಟ್, ಇ-ಸ್ಟಾಂಪಿಂಗ್, ಸೇಫ್ ಡೆಪಾಸಿಟ್ ಲಾಕರ್ಸ್, ವಿಮಾನ, ರೈಲ್ವೇ, ಬಸ್ ಟಿಕೆಟ್ಗಳ ಬುಕಿಂಗ್ ಸೇವೆಗಳೊಂದಿಗೆ ಮಿನಿ ಎಟಿಎಂ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು, ದಿವ್ಯಾಂಗರು, ವಿಧವೆಯರು, ಸೈನಿಕರು ಹಾಗೂ ಮಾಜಿ ಸೈನಿಕರುಗಳಿಗೆ ಠೇವಣಿಗಳ ಮೇಲೆ 0.5% ಹೆಚ್ಚಿನ ಬಡ್ಡಿದರ ನೀಡುತ್ತಿದ್ದು, ಗ್ರಾಹಕರಿಗೆ ಮನೆ ಮನೆಗೆ ಸೇವೆ ತಲುಪಿಸುವುದರೊಂದಿಗೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸಿದ್ಧಸಿರಿಯ ನಿರ್ದೇಶಕ ಜಗದೀಶ ಕ್ಷತ್ರಿ ಜನರಲ್ ಮ್ಯಾನೇಜರ್ ಉಮಾದೇವಿ ಹಿರೇಮಠ, ವಲಯ ಅಧಿಕಾರಿಗಳಾದ ಗುರುನಗೌಡ ಬಿರಾದಾರ, ರವಿ ಗೌಡ ಪಾಟೀಲ, ಚಂದ್ರಕಾಂತ ಗಿನ್ನಿ, ಗಣ್ಯ ವ್ಯಾಪಾರಸ್ಥರು ಹಾಗೂ ಗ್ರಾಹಕರಾದ ಶರಣು ಮೆಡೆದಾರ್, ಡಾ. ಮಲ್ಲಿಕಾರ್ಜುನ ಬಿರಾದಾರ, ಎಸ್.ಎಸ್. ಬಿರಾದಾರ, ಮುತ್ತು ದೇಸಾಯಿ, ಎಸ್.ವಿ. ಕಕ್ಕಳಮೇಲಿ, ಪ್ರದೀಪ್ ಧನಶ್ರೀ, ಡಾ. ರಮೇಶ್ ಪೂಜಾರಿ, ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದರು.