ಸಿದ್ದಾಪುರ: ಮಳೆಗಾಲದ ಆರಂಭದಲ್ಲಿಯೇ ಹೆಸ್ಕಾಂ ಇಲಾಖೆಗೆ ಆಘಾತ ಉಂಟಾಗಿದೆ. ಜೂನ್ ತಿಂಗಳಲ್ಲಿ ಬೀಸಿದ ಗಾಳಿ ಹಾಗೂ ಮಳೆಗೆ ಅಂದಾಜು. 16.68ಲಕ್ಷ ರೂಗಳಷ್ಟು ಹಾನಿ ಸಂಭವಿಸಿದೆ.
ಗಾಳಿ-ಮಳೆಗೆ ತಾಲೂಕಿನಲ್ಲಿ ಎಚ್ಟಿ ಲೈನ್(ಹೈಟೆನ್ಷನ್) ವಿದ್ಯುತ್ ಕಂಬ 64 ಹಾಗೂ ಎಲ್ಟಿ ಲೈನ್ ವಿದ್ಯುತ್ ಕಂಬ 52 ಒಟ್ಟು 116 ವಿದ್ಯುತ್ ಕಂಬ ಧರೆಗುರುಳಿವೆ. ಒಂದು ಟಿಸಿ ಹಾಳಾಗಿದ್ದು ಇವೆಲ್ಲವುಗಳಿಂದ ಅಂದಾಜು 16.68 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಮನೆ 12, ಇಟಗಿ 18, ಹಲಗೇರಿ 15,ನಿಲ್ಕುಂದ 17,ಹೆಗ್ಗರಣಿ 9 ಹಾಗೂ ಹಾರ್ಸಿಕಟ್ಟಾ ಗ್ರಾಪಂನಲ್ಲಿ 6 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಉಳಿದ ಗ್ರಾಪಂ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಕಂಬಗಳು ಧರೆಗುರುಳಿವೆ.
ಪ್ರತಿ ವರ್ಷ ಮಳೆಗಾಲದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬೀಳುವುದರಿಂದ ಹಾಗೂ ಕಂಬಗಳು ಮುರಿದು ಬೀಳುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳುತ್ತದೆ. ಎಷ್ಟೇ ಗಾಳಿ-ಮಳೆ ಇದ್ದರೂ ಬಿದ್ದ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಮುಂದಾಗುತ್ತೇವೆ. ಈ ವರ್ಷ ಇಲ್ಲಿಯವರೆಗೆ ಎಲ್ಲೆಲ್ಲಿ ಹಾನಿ ಸಂಭವಿಸಿದೆಯೋ ಎಲ್ಲ ಕಡೆಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ.
| ದಿಲೀಪಕುಮಾರ ಸಹಾಯಕ ಇಂಜಿನಿಯರ್ ಹೆಸ್ಕಾಂ ಸಿದ್ದಾಪುರ