ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಸಂಘ ಹಾಗೂ ಶಿವಮೊಗ್ಗದ ಸಾಗರ ರಸ್ತೆಯ ಕೈಗಾರಿಕಾ ಉದ್ಯಮಿಗಳ ಅಸೋಸಿಯೇಷನ್ನಿಂದ ದಾನಿಗಳ ನೆರವಿನೊಂದಿಗೆ ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಒಟ್ಟು 13 ಟನ್ ಅಕ್ಕಿಯನ್ನು ಗುರುವಾರ ಕಳುಹಿಸಲಾಯಿತು.
ಈ ವೇಳೆ ಮಾತನಾಡಿದ ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡ ಶೆಟ್ಟಿ, ಕಾರ್ಮಿಕರ ಪರಿಶ್ರಮ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿ. ಕೈಗಾರಿಕೆಗಳ ಬೆಳವಣಿಗೆಯಲ್ಲಿ ಶಿವಮೊಗ್ಗ ರಾಜ್ಯದಲ್ಲೇ ಉನ್ನತ ಸ್ಥಾನದಲ್ಲಿದೆ. ಇದಕ್ಕೆ ಕಾರ್ಮಿಕರು ಮೂಲ ಕಾರಣ. ಕಾರ್ಮಿಕರು ಹಾಗೂ ಕೈಗಾರಿಕೋದ್ಯಮಿಗಳಿಗೆ ಇನ್ನಷ್ಟು ಒಳಿತಾದರೆ ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಅನ್ನದಾಸೋಹಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸಮರ್ಪಿಸಲಾಗುವುದು ಎಂದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಮಾತನಾಡಿ, ಕೈಗಾರಿಕೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಶಿವಮೊಗ್ಗ ರಾಜ್ಯಕ್ಕೆ ಮಾದರಿಯಾಗಿದೆ. ಪ್ರತಿ ವರ್ಷ ದಾನಿಗಳ ಸಹಕಾರದಿಂದ ನಿರಂತರವಾಗಿ ಅಕ್ಕಿ ಸಮರ್ಪಣಾ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯದರ್ಶಿ ಕಿರಣ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಪ್ರಮುಖರಾದ ಜಿ.ವಿ.ಕಿರಣಕುಮಾರ್, ಬಿ.ಎನ್.ಕಾರ್ತಿಕ್, ಸೌಮ್ಯಾ ಕಿರಣ್, ಅಜಿತ್ ಹೆಗ್ಡೆ, ಜೆ.ಎಲ್.ಪದ್ಮನಾಭ ಮುಂತಾದವರಿದ್ದರು.