ಶಿವಮೊಗ್ಗ: ಮತದಾನ, ಮತ ಎಣಿಕೆ, ಪರೀಕ್ಷೆ ಸಂದರ್ಭದಲ್ಲಿ, ಸಮಾಜದಲ್ಲಿ ಶಾಂತಿ ಭಂಗ ಉಂಟಾದಾಗ ಜಿಲ್ಲಾ ದಂಡಾಧಿಕಾರಿಗಳು ನಿಷೇಧಾಜ್ಞೆ ವಿಧಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭದ್ರಾ ನಾಲೆ, ನದಿಯಲ್ಲಿ ಬೇಸಿಗೆಯಲ್ಲಿ ನೀರು ಹರಿಸಿದರೂ ನಿಷೇಧಾಜ್ಞೆ ವಿಧಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಹೌದು, ಈಗ ಫೆ.16ರವರೆಗೆ ಭದ್ರಾ ನಾಲೆ ಮತ್ತು ನದಿಪಾತ್ರದ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚುತ್ತಿದೆ. ಬೇಸಿಗೆಯಲ್ಲಿ ಭದ್ರಾ ನೀರಿಗಾಗಿ ಹೊಡೆದಾಟಗಳು, ಹೋರಾಟಗಳು ನಡೆದ ನಿದರ್ಶನವಿದೆ. ಅದರಲ್ಲೂ ಈ ಬಾರಿ ಬೇಸಿಗೆ ಇನ್ನಷ್ಟು ಭೀಕರವಾಗಿದೆ. ಭದ್ರಾ ಜಲಾಶಯದಲ್ಲೂ ನೀರಿನ ಸಂಗ್ರಹ ಜಾಸ್ತಿಯಿಲ್ಲ. ಈ ನಡುವೆ ಫೆ.26ರವರೆಗೆ ಹಾವೇರಿ, ಗದಗ ಭಾಗಕ್ಕೆ ನದಿ ಮೂಲಕ ಕುಡಿಯುವ ನೀರು ಹರಿಸಲಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಫೆ.5ರಿಂದ ಇದುವರೆಗೆ ನೀರು ಹರಿಸಲಾಗಿದೆ. ಆದರೆ ಈ ನೀರು ಜಾಕ್ವೆಲ್ವರೆಗೂ ತಲುಪಿಲ್ಲ. ನದಿಗೆ ಪಂಪ್ಸೆಟ್ ಅಳವಡಿಸಿ ರೈತರು ನೀರೆತ್ತುತ್ತಿದ್ದಾರೆ. ಕುಡಿಯುವ ಉದ್ದೇಶಕ್ಕೆ ಬಳಕೆಯಾಗಬೇಕಾದ ನೀರು ಅನ್ಯಕಾರಣಕ್ಕೆ ಉಪಯೋಗವಾಗುತ್ತಿದೆ. ನದಿ ಪಾತ್ರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪಂಪ್ಸೆಟ್ಗಳಿವೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ನಾಲೆ ಹಾಗೂ ನದಿಗೆ ಪಂಪ್ಸೆಟ್ ಅಳವಡಿಸಿರುವುದನ್ನು ತೆರವುಗೊಳಿಸಬೇಕು. ಅಕ್ರಮ ಮಾರ್ಗದಲ್ಲಿ ನೀರು ಪಡೆಯಲು ಯತ್ನಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ಜಿಲ್ಲಾ ದಂಡಾಧಿಕಾರಿ ಎಚ್ಚರಿಸಿದ್ದಾರೆ.