ಹುಬ್ಬಳ್ಳಿ: ಕರೊನಾ ಪ್ರಕರಣಗಳು ಪತ್ತೆಯಾದ ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಜಿಲ್ಲೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಉಳಿದೆಡೆ ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಹೋಟೆಲ್ಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಗ್ರಾಹಕರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಪಂ ಸಿಇಒ ಡಾ. ಸತೀಶ್, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಜತೆ ಅವರು ಸೋಮವಾರ ಮೊಬೈಲ್ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಕೇಂದ್ರ ಸರ್ಕಾರದ ನಿರ್ದೇಶನಗಳನ್ವಯ ಹೋಟೆಲ್ಗಳಲ್ಲಿ ಪಾರ್ಸಲ್ಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಆರಂಭವಾಗಿದ್ದು, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಗೋಕುಲ, ತಾರಿಹಾಳದ ಕೈಗಾರಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ವಿುಕರು ಕಡ್ಡಾಯವಾಗಿ ತಮ್ಮ ಕಂಪನಿಗಳ ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸಬೇಕು. ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಕೆ ಶಿಪ್ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಮೇ 17ರವರೆಗೆ ಲಾಕ್ಡೌನ್ ವಿಸ್ತರಣೆಯಾಗಿದೆ. ಜನರು ಪರಸ್ಪರ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕು ಎಂದರು.
ಸೇವೆ ನೀಡಿದ ಕೆಲ ಹೋಟೆಲ್ಗಳು: ನಗರದಲ್ಲಿ ಕೆಲವು ಹೋಟೆಲ್ಗಳು ಸೋಮವಾರ ಪಾರ್ಸಲ್ ಸೇವೆ ನೀಡಿದವು. ನಿರ್ಬಂಧಿತ ಪ್ರದೇಶ (ಸೀಲ್ಡೌನ್) ಹೊರತು ಪಡಿಸಿ ಉಳಿದೆಡೆ ಪಾರ್ಸಲ್ ಮೂಲಕ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸಲು ಅವಕಾಶವಿದ್ದವು. ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕಿತ್ತು. ಆದರೆ, ಲಾಕ್ಡೌನ್ ನಿಯಮಗಳು ಜಟಿಲವಾಗಿದ್ದರಿಂದ ಬಹುತೇಕ ಹೋಟೆಲ್ಗಳು ಪಾರ್ಸಲ್ ಸೇವೆಗೆ ಮುಂದಾಗಿರಲಿಲ್ಲ. ಇಂದಿನಿಂದ ಪಾರ್ಸಲ್ ಸೇವೆಗೆ ಮುಂದಾಗಿವೆ. ಇನ್ನೊಂದಿಷ್ಟು ಹೋಟೆಲ್ಗಳು ಮುಂದಿನ ದಿನಗಳಲ್ಲಿ ಪಾರ್ಸಲ್ ಸೇವೆಗೆ ಇಳಿಯಬಹುದು. ಪಾರ್ಸಲ್ ಸೇವೆ ನೀಡಲು ಪಾಲಿಕೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಸಂಜೆ 7ರವರೆಗೆ ಮಾತ್ರ ಅವಕಾಶವಿರುತ್ತದೆ.