ಚಿತ್ರದುರ್ಗ: ಹೊಸತನಕ್ಕೆ ಪಠ್ಯೇತರ ಚಟುವಟಿಕೆಗಳು ನಾಂದಿಯಾಗಲಿದ್ದು, ಶಿಕ್ಷಕರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಕರ್ನಾಟಕ ಶಿಕ್ಷಕರ ಕಲ್ಯಾಣ ನಿಧಿ, ಡಿಡಿಪಿಐ ಕಾರ್ಯಾಲಯದಿಂದ ನಗರದ ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಹ-ಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾ ಯುಗವಾದ್ದರಿಂದ ಸದಾ ಶಿಕ್ಷಕರು ಹೊಸತನ, ವಿನೂತನ ಪ್ರಯೋಗ ಕೈಗೊಳ್ಳುವುದನ್ನು ರೂಢಿಸಿಕೊಳ್ಳಬೇಕು. ತಮ್ಮ ಕೌಶಲ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳನ್ನು ಸ್ಪರ್ಧೆಗಳಿಗೆ ತಯಾರು ಮಾಡಬೇಕು. ಜತೆಗೆ ಧನಾತ್ಮಕ ಚಿಂತನೆ ಬೆಳೆಸಬೇಕು ಎಂದು ಹೇಳಿದರು.
ಬಿಇಒ ಎಸ್.ನಾಗಭೂಷಣ್ ಮಾತನಾಡಿ, ವೃತ್ತಿಯ ಹೊರತಾಗಿ ಶಿಕ್ಷಕರಲ್ಲಿ ಇರುವ ಪ್ರತಿಭೆ ಹೊರಹಾಕಲು ಕೂಡ ಪಠ್ಯೇತರ ಸ್ಪರ್ಧಾ ಚಟುವಟಿಕೆ ಸಹಕಾರಿಯಾಗಲಿದೆ ಎಂದರು.
ಜನಪದ ಗೀತೆ, ಆಶು ಭಾಷಣ, ಪ್ರಬಂಧ, ಸ್ಥಳದಲ್ಲೇ ಪಾಠೋಪಕರಣ (ಟಿಎಲ್ಎಂ) ತಯಾರಿಕೆ, ಚಿತ್ರ ಬಿಡಿಸುವ, ರಸಪ್ರಶ್ನೆ-ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ವಿಷಯವಾಗಿ ಸ್ಪರ್ಧೆಗಳು ನಡೆದವು.
ಸಮಗ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶ್, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ವಿವಿಧ ವಿಷಯಗಳ ಪರಿವೀಕ್ಷಕರಾದ ಗೋವಿಂದಪ್ಪ, ಚಂದ್ರಣ್ಣ, ಶಿವಣ್ಣ ಇತರರಿದ್ದರು.