ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪಕ್ಕದ ಕೆರೆಯಲ್ಲಿ ಕಳೆದೆರಡು ದಿನಗಳಿಂದ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದೆ.
ಗ್ರಾಮದ ಯುವಕನೊಬ್ಬನಿಗೆ ಭಾನುವಾರ ಮಧ್ಯಾಹ್ನ ಈ ಮೊಸಳೆ ಕಾಣಿಸಿಕೊಂಡಿದ್ದನ್ನು ಗ್ರಾಮಸ್ಥರಿಗೆ ತಿಳಿಸಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕೆರೆ ಸುತ್ತಲಿನ ಪ್ರದೇಶದಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ತೆರಳುತ್ತಾರೆ. ವಿದ್ಯಾರ್ಥಿಗಳು, ಗ್ರಾಮಸ್ಥರು ಕೆರೆ ಸಮೀಪಕ್ಕೆ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಮೊಸಳೆ ದಾಳಿ ಮಾಡುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಕಳೆದ ನಾಲ್ಕು ವರ್ಷದಿಂದ ಈ ಬೃಹತ್ ಗಾತ್ರದ ಮೊಸಳೆ ಕೆರೆಯಲ್ಲಿದ್ದು, ಜನಜಂಗುಳಿ ಕಡಿಮೆಯಾದಾಗ ಹೊರಬರುತ್ತದೆ ಎಂದು ಶಬ್ಬಿರ್ ಮಖಾಂದಾರ ತಿಳಿಸಿದ್ದಾರೆ.
ಈ ಕುರಿತು ಮುಖ್ಯ ಅರಣ್ಯಾಧಿಕಾರಿ, ಮುಖ್ಯ ಅಭಿಯಂತರ, ಜಲ ಸರಬರಾಜು ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕೂಡಲೇ ಇನ್ನಾದರೂ ಸಂಬಂಧಪಟ್ಟವರು ಕೆರೆ ಸುತ್ತಲಿನ ಪ್ರದೇಶಕ್ಕೆ ತಂತಿ ಬೇಲಿ ಹಾಕಿ ಮೊಸಳೆ ಸೆರೆ ಹಿಡಿಯುವಂತೆ ಶಾಲೆ ಮುಖ್ಯಗುರು ಮಲ್ಲಿಕಾರ್ಜುನ ಭಜಂತ್ರಿ, ಕಾಂಗ್ರೆಸ್ ಯುವ ಮುಖಂಡ ಚಂದ್ರಶೇಖರ ಕೆಂಭಾವಿ, ಆದೀಲ್ ನಾಯ್ಕೋಡಿ, ಮುಸ್ತ್ಾ ವಡಗೇರಿ, ರಮೇಶ ಡಿಗ್ಗಿ, ರಮೇಶ ತಳವಾರ, ಸಂತೋಷ ಭಜಂತ್ರಿ ಆಗ್ರಹಿಸಿದ್ದಾರೆ.