ಹೊನ್ನಾವರ: ಚತುಷ್ಪಥ ಕಾಮಗಾರಿಗಾಗಿ ಗುಡ್ಡ ಕೊರೆದಿದ್ದರಿಂದ ಕಲ್ಲುಬಂಡೆಯೊಂದು ಹೆದ್ದಾರಿಯ ಮೇಲೆ ಉರುಳಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಗುರುವಾರ ತಾಲೂಕಿನ ಕೆಳಗಿನೂರು ಗ್ರಾಮದ ಹೊಸಪಟ್ಟಣ ಕ್ರಾಸ್ನಲ್ಲಿ ಸಂಭವಿಸಿದೆ.
ಹೊಸಪಟ್ಟಣದ ಗಿರೀಶ ಬುಧವಂತ ನಾಯ್ಕ ಹಾಗೂ ಕೃಷ್ಣ ಶಿವಪ್ಪ ನಾಯ್ಕ ಎಂದು ಅಪಘಾತದಲ್ಲಿ ಗಾಯಗೊಂಡವರಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ಬೈಕ್ನಲ್ಲಿ ತೆರಳುತ್ತಿದ್ದಾಗ ಹೊಸಪಟ್ಟಣ ತಿರುವಿನ ಸಮೀಪ ಈ ಅವಘಡ ನಡೆದಿದೆ. ರಾಷ್ಟಿಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಐಆರ್ಬಿ ಕಂಪನಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆದಿರುವುದರಿಂದ ಗುಡ್ಡದಿಂದ ಉರುಳಿ ಬಂದ ಬೃಹತ್ ಬಂಡೆಗಲ್ಲು ಬೈಕ್ಗೆ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಗಿರೀಶ ನಾಯ್ಕ ಅವರ ಕೈ, ಕಾಲುಗಳಿಗೆ ಗಾಯವಾಗಿದೆ. ಬೈಕ್ ಸಂಪೂರ್ಣ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ಹೊನ್ನಾವರ ತಹಸೀಲ್ದಾರ್ ವಿವೇಕ ಶೇಣ್ವಿ, ಸಿಪಿಐ ವಸಂತ ಆಚಾರಿ, ಮಂಕಿ ಪಿಎಸ್ಐ. ಪರಮಾನಂದ ಕೊಣ್ಣೂರ್ ಸ್ಥಳ ಪರಿಶೀಲಿಸಿದರು.
ಗುಡ್ಡ ಕುಸಿತದ ಆತಂಕ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ಐಆರ್ಬಿ ಕಂಪನಿಯವರು ಗುಡ್ಡವನ್ನು ಬೃಹತ್ ಯಂತ್ರಗಳನ್ನು ಬಳಸಿ ಕೊರೆದಿದ್ದರು. ಗುಡ್ಡದಲ್ಲಿನ ಸಡಿಲ ಮಣ್ಣು ಮಳೆಗಾಲದಲ್ಲಿ ಕುಸಿಯದಂತೆ ತಡೆಯುವುದಕ್ಕೆ ಅನೇಕ ಕಡೆ ಕಬ್ಬಿಣದ ಜಾಲರಿ ಹೊದೆಸಿ ಕಾಂಕ್ರೀಟ್ನಿಂದ ಮುಚ್ಚುವ ಮೂಲಕ ಗುಡ್ಡ ಕುಸಿಯದಂತೆ ತಡೆಯೊಡ್ಡಲಾಗಿತ್ತು. ಆದರೆ, ಕಳೆದೆರಡು ವರ್ಷದಲ್ಲಿ ಅನೇಕ ಕಡೆ ಕಾಂಕ್ರೀಟ್ ಸಮೇತ ಗುಡ್ಡ ಕುಸಿಯುತ್ತಿದೆ. ಕೆಳಗಿನೂರಿನ ನಾಜಗಾರ ಕ್ರಾಸ್ನಿಂದ ಚರ್ಚ್ವರೆಗೆ ಸುಮಾರು 500 ಮೀಟರ್ ಉದ್ದಕ್ಕೂ ಬೃಹತ್ ಬಂಡೆಗಳಿಂದ ಆವೃತ್ತವಾದ ಗುಡ್ಡವಿದೆ. ಗುಡ್ಡದಲ್ಲಿ ಸಡಿಲವಾದ ಜೇಡಿ ಮಣ್ಣಿದ್ದು, ಗುಡ್ಡದ ಬುಡದಲ್ಲಿ ಸದಾ ನೀರು ಒಸರುತ್ತಿರುವುದರಿಂದ ಮೇಲಿರುವ ಬಂಡೆಗಳು ಉರುಳುವ ಆತಂಕ ಜನರನ್ನು ಕಾಡುತ್ತಿದೆ.