ಯಲ್ಲಾಪುರ: ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಹೊತ್ತಿ ಉರಿದ ಘಟನೆ ತಾಲೂಕಿನ ಗುಳ್ಳಾಪುರ ಬಳಿಯ ಮೊಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ.
ಕೊಪ್ಪಳದಿಂದ ಅಂಕೋಲಾ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ, ಟೈರ್ನ ಘರ್ಷಣೆಯಿಂದಾಗಿ ಬೆಂಕಿ ತಗುಲಿದೆ. ಚಾಲಕ ಲಾರಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಾರಿಯಲ್ಲಿದ್ದ ಸಿಮೆಂಟ್ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಲು ಯತ್ನಿಸಿದರಾದರೂ ಅಷ್ಟರಲ್ಲಾಗಲೇ ಲಾರಿ ಸುಟ್ಟು ಹೋಗಿತ್ತು. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.