ರೋಣ: ಬಡಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಉಚಿತವಾಗಿ ಹಾಲು ವಿತರಿಸುತ್ತಿದೆ. ಆದರೆ, ಪುರಸಭೆಯವರು ಹಾಲು ವಿತರಣೆಯಲ್ಲಿ ತಾರತಮ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ 11ನೇ ವಾರ್ಡ್ನ ಜನತಾ ಪ್ಲಾಟ್ನ ಬಡ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯ ಒಂದು ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳ ಪಟ್ಟಿ ತಯಾರಿಸಿ ಆ ಕುಟುಂಬಗಳಿಗೆ ಹಾಲು ಹಂಚುವುದಾಗಿ ತಿಳಿಸಿದ್ದರು. ಆದರೆ, ಆ ಪಟ್ಟಿಯ ಪ್ರಕಾರ ವಿತರಿಸದೇ ಕೆಲ ನಿರ್ದಿಷ್ಟ ಬಡಾವಣೆಗಳಿಗೆ ಮಾತ್ರ ವಿತರಿಸುತ್ತಿದ್ದಾರೆ. ಬಡವರೇ ಹೆಚ್ಚಾಗಿ ವಾಸಿಸುವ ಮುದೇನಗುಡಿ ರಸ್ತೆಯಲ್ಲಿರುವ ಜನತಾ ಪ್ಲಾಟ್ನತ್ತ ಯಾವೊಬ್ಬ ಅಧಿಕಾರಿಯೂ ಸುಳಿಯುತ್ತಿಲ್ಲ. ಇಲ್ಲಿನ ಪುರಸಭೆ ಸಿಬ್ಬಂದಿ ಜನರ ಮುಖ ನೋಡಿ ಹಾಲು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಇಲ್ಲಿರುವ ಕಡು ಬಡವರನ್ನು ಗುರುತಿಸಿ ಜನತಾ ಪ್ಲಾಟ್ ಮಾಡಿ ನಮಗೆ ಮನೆ ನೀಡಿದೆ. ಇಲ್ಲಿ ಎಸ್ಸಿ. ಎಸ್ಟಿ, ಅಲ್ಪಸಂಖ್ಯಾತ ಬಡ ಕುಟುಂಬಗಳು ವಾಸಿಸುತ್ತಿದ್ದು, ವಾಸ್ತವವಾಗಿ ಇಲ್ಲಿ ಉಚಿತವಾಗಿ ಹಾಲು ಪೂರೈಕೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
| ಮುದಿಯವ್ವ ಹಲಗಿ, ಜನತಾ ಪ್ಲಾಟ್ ನಿವಾಸಿ