ಬೀದರ್: ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ 20 ಮತ್ತು 21ರಂದು ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಮಠದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರನ್ನು ಕಸಾಪ ಪದಾಧಿಕಾರಿಗಳು ಸೋಮವಾರ ಭೇಟಿ ಮಾಡಿ ಸಮ್ಮೇಳನದ ಪೂರ್ವಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದರು. ಒಂದು ವರ್ಷದ ಹಿಂದೆ 19ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕರೊನಾ ಹಾಗೂ ಕಸಾಪ ಚುನಾವಣೆ ಕಾರಣ ಸಮ್ಮೇಳನ ನಡೆಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹಾರಕೂಡ ಮಠಕ್ಕೆ ಭೇಟಿ ನೀಡಿದಾಗ ಮುಂದಿನ ಸಮ್ಮೇಳನ ಹಾರಕೂಡದಲ್ಲಿ ನಡೆಸುವುದಾಗಿ ಪೂಜ್ಯರಿಗೆ ಹೇಳಿದ್ದರು. ಅದರಂತೆ ಈಗ ಸಮ್ಮೇಳನದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಚನ್ನಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2003ರ ಜ.6, 7ರಂದು ಸಾಹಿತಿ ಯಶೋದಮ್ಮ ಸಿದಬಟ್ಟೆ ಅಧ್ಯಕ್ಷತೆಯಲ್ಲಿ ಹಾರಕೂಡದಲ್ಲಿ ನಡೆದಿತ್ತು. ಆಗ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಪರಿಷತ್ ಜಿಲ್ಲಾಧ್ಯಕ್ಷರಾಗಿದ್ದರು. ಹಾರಕೂಡದಲ್ಲಿ ಇದೀಗ ಎರಡನೇ ಬಾರಿ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಹುಮನಾಬಾದ್ ಅಧ್ಯಕ್ಷ ಸಿದ್ಧಲಿಂಗ ಚಿಂಚೋಳಿ, ಸಚಿನ್ ಮಠಪತಿ, ಜಯದೇವಿ ಯದಲಾಪುರೆ, ಡಾ.ಬಸವರಾಜ ಬಲ್ಲೂರ, ರಮೇಶ ಬಿರಾದಾರ ಇತರರಿದ್ದರು.