ಶಿರಸಿ: ಚಾಲಕ ಹಾಗೂ ನಿರ್ವಾಹಕರಿಂದ ಕಡ್ಡಾಯ ಹಾಜರಾತಿ ಪಡೆಯಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾದ ಕಾರಣ ವಿಭಾಗೀಯ ಕಚೇರಿ ಬಳಿ ಅನಗತ್ಯ ಜನದಟ್ಟಣೆ ಉಂಟಾಗುತ್ತಿದೆ. ಹಾಗಾಗಿ ಹಾಜರಾತಿ ನಿಯಮ ಸರಳೀಕರಿಸಬೇಕು ಎಂದು ಶನಿವಾರ ಸಿಬ್ಬಂದಿ ಒತ್ತಾಯಿಸಿದ್ದಾರೆ.
ಇಲ್ಲಿನ ಸಾರಿಗೆ ವಿಭಾಗದ ವಿಭಾಗೀಯ ಕಚೇರಿ ಎದುರು ಜಮಾಯಿಸಿದ ಚಾಲಕ, ನಿರ್ವಾಹಕರು, ಲಾಕ್ಡೌನ್ ಸರಳೀಕರಣದ ನಂತರ ಆರಂಭಗೊಂಡ ಸಾರಿಗೆ ಬಸ್ಗಳು ಸದ್ಯ ಕೆಲವೇ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹೀಗಾಗಿ 25ರಷ್ಟು ಸಿಬ್ಬಂದಿ ಸಾಕಾಗುತ್ತಿದೆ. ಆದರೆ, ವಿಭಾಗದ 200ಕ್ಕೂ ಹೆಚ್ಚು ಚಾಲಕ, ನಿರ್ವಾಹಕರು ನಿತ್ಯ ನಗರದ ವಿಭಾಗೀಯ ಕಚೇರಿಗೆ ಆಗಮಿಸಿ ಕಡ್ಡಾಯವಾಗಿ ಸಹಿ ಮಾಡಬೇಕಿದೆ. ಹೀಗಾಗಿ ಕರ್ತವ್ಯ ಇರದಿದ್ದರೂ ಅನಿವಾರ್ಯವಾಗಿ ಕಚೇರಿಗೆ ಆಗಮಿಸಬೇಕು. ಇದರಿಂದ ಕಚೇರಿ ಎದುರು ಜನದಟ್ಟಣೆ ಉಂಟಾಗುತ್ತಿದೆ. ಇದರ ಬದಲು ಮನೆಯಿಂದಲೇ ಮೊಬೈಲ್ ಫೋನ್ ಮೂಲಕ ಒಂದು ಎಸ್ಎಂಎಸ್ (ಕಿರು ಸಂದೇಶ ಸೇವೆ) ಹಾಜರಾತಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ವಾಕರಸಾ ಸಂಸ್ಥೆಯ ಹಿರಿಯ ಅಧಿಕಾರಿ ವಿವೇಕ ಹೆಗಡೆ, ಪ್ರತಿಯೊಬ್ಬರೂ ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಧಿಕಾರಿಗಳಿಂದ ಸೂಚನೆ ಇದೆ. ಆ ಪ್ರಕಾರ ಕಡ್ಡಾಯ ಸಹಿ ಪಡೆಯಲಾಗುತ್ತಿದೆ. ಅಲ್ಲದೆ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಿಸಬೇಕಿದೆ. ಹೀಗಾಗಿ ಎಲ್ಲರೂ ಕರ್ತವ್ಯದಲ್ಲಿರುವುದು ಕಡ್ಡಾಯ. ಕೋವಿಡ್- 19 ಸಂದರ್ಭದಲ್ಲಿ ರಾಷ್ಟ್ರೀಯ ಹಿತ ನೋಡಬೇಕೇ ವಿನಃ ವೈಯಕ್ತಿಕ ವಿಚಾರವಲ್ಲ. ಹಾಗಾಗಿ ನಿತ್ಯವೂ ಗುಂಪಾಗಿ ಸೇರದೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.