ಆನಂದಪುರ: ಗಿಡ, ಮರಗಳು ಪರಿಸರದ ಮುಖ್ಯ ಅಂಶವಾಗಿದ್ದು ಅವುಗಳ ರಕ್ಷಣೆ ಪೋಷಣೆ ನಮ್ಮೆಲ್ಲರ ಹೊಣೆ. ಹಸಿರೀಕರಣದಿಂದ ಮಾನವನ ಬದುಕು ಸಮೃದ್ಧವಾಗಿರುತ್ತದೆ ಎಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಉಪನ್ಯಾಸಕ ಡಾ.ಶಶಿಧರ ತಿಳಿಸಿದರು.
ಇಲ್ಲಿಗೆ ಸಮೀಪದ ಗೌತಮಪುರದ ಬನಶಂಕರಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಹಸಿರೀಕರಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನಿಸರ್ಗದಲ್ಲಿ ಸಹಜವಾಗಿ ಬೆಳೆಯುವ ಗಿಡ, ಮರಗಳಲ್ಲಿ ನೂರಾರು ಬಗೆಯ ಔಷಧ ಗುಣಗಳಿರುತ್ತವೆ. ಪ್ರತಿ ಊರಿನಲ್ಲಿ ಕಾಡು ಪ್ರದೇಶ ಮತ್ತು ಲಭ್ಯ ಪರಿಸರದಲ್ಲಿ ಕಾಡು ಜಾತಿಯ ಸಸಿ ನೆಟ್ಟು ಬಳೆಸುವ ಅಗತ್ಯವಿದೆ ಎಂದರು.
ಸಾಗರ ತಾಲೂಕಿನ ಹಂಸಗಾರು, ಹೆಗ್ಗೋಡು, ನೀಚಡಿ, ಕಾನುಗೋಡು ಇತ್ಯಾದಿ ಗ್ರಾಮಗಳಲ್ಲಿನ ಜನ ಜಲ ಸಾಕ್ಷರತೆ ಮತ್ತು ಅರಣ್ಯ ಸಾಕ್ಷರತೆಯಲ್ಲಿ ಮಾದರಿಯಾಗಿದ್ದಾರೆ ಎಂದರು.