ನವಲಗುಂದ: ತಾಲೂಕಿನ ಮೊರಬ-ಗುಮ್ಮಗೋಳ ಗ್ರಾಮಗಳ ಮಧ್ಯೆ ತುಪ್ಪರಿಹಳ್ಳದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಮೊರಬ ಗ್ರಾಮಸ್ಥರು ರಕ್ಷಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕು ವಟ್ಟನೂರ ಗ್ರಾಮದ ಮಲ್ಲಪ್ಪ ಇಮ್ಮಡಿ (35) ಮತ್ತು ಕಿರಣ ವಟ್ಟನೂರ (20) ರಕ್ಷಿಸಲ್ಪಟ್ಟವರು. ಇವರು ಮಾವ-ಅಳಿಯಂದಿರಾಗಿದ್ದು, ಊರಿಂದೂರಿಗೆ ಅಲೆದಾಡಿ ಹೆಳವತನ (ವಂಶಾವಳಿ ದಾಖಲೆ ಸಂಗ್ರಹ) ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಬ್ಬರೂ ಮೊರಬ ಗ್ರಾಮದಿಂದ ಗುಮ್ಮಗೋಳಕ್ಕೆ ಬೈಕ್ನಲ್ಲಿ ಹೊರಟಾಗ ತುಪ್ಪರಿಹಳ್ಳ ದಾಟುತ್ತಿದ್ದಾಗ ಸಂಜೆ 4.40ರ ಸುಮಾರಿಗೆ ಘಟನೆ ಸಂಭವಿಸಿದೆ.
ಬೈಕ್ ಆಯತಪ್ಪಿ ಕಿರು ಸೇತುವೆ ಕೆಳಗೆ ಬಿದ್ದಿದೆ. ಮಲ್ಲಪ್ಪ ಇಮ್ಮಡಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ 300 ಮೀಟರ್ ದೂರದಲ್ಲಿ ವಿದ್ಯುತ್ ಕಂಬದ ಬಳಿ ಮುಳ್ಳು ಕಂಟಿ ಹಿಡಿದುಕೊಂಡು ಕಾಪಾಡಿ ಎಂದು ಅಂಗಲಾಚುತ್ತಿದ್ದ. ಕಿರಣನು ಸೇತುವೆಯ ಗೂಟದ ಕಲ್ಲು ಹಿಡಿದು ನಿಂತಿದ್ದ. ಅರಚಾಟ ಕೇಳಿ ಓಡಿಬಂದ ಮೊರಬ ಗ್ರಾಮದ ರಾಜು ಪಾರ್ವತೆಮ್ಮನವರ ಮತ್ತು 15ರಷ್ಟು ಜನರು ಹಗ್ಗದ ಮೂಲಕ ಮಲ್ಲಪ್ಪ ಇಮ್ಮಡಿಯನ್ನು ಸಂರ್ಪಸಿ, ರಕ್ಷಿಸಿದರು. ಕಿರಣ ವಟನೂರನನ್ನು ಹಲವರು ಕೈ ಹಿಡಿದು ಮಾನವ ಸರಪಳಿ ರಚಿಸಿ ರಕ್ಷಣೆ ಮಾಡಿದರು. ಸಂಕಷ್ಟದಲ್ಲಿದ್ದಾಗ ಒದಗಿಬಂದು ರಕ್ಷಿಸಿದ ಗ್ರಾಮಸ್ಥರಿಗೆ ಮಲ್ಲಪ್ಪ ಮತ್ತು ಕಿರಣ ಕೃತಜ್ಞತೆ ಸಲ್ಲಿಸಿದರು.