ಹಳಿಯಾಳ: ಇಲ್ಲಿನ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಅಜರ್ ಆರ್. ಬಸರಿಕಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸುವರ್ಣಾ ಮಾದರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆರಿಸಿದ ನಂತರ 2018 ಆಗಸ್ಟ್ನಲ್ಲಿ ಪುರಸಭೆ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 7, ಜೆ.ಡಿ.ಎಸ್ 1, ಪಕ್ಷೇತರ 1 ಹಾಗೂ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದಿತ್ತು.
ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಚಂದ್ರಕಾಂತ ಕಮ್ಮಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಾ ಹಿರೇಕರ ಸ್ಪರ್ಧಿಸಿದ್ದರು. ಕಾಂಗ್ರೆಸ್ನ 14 ಮತ್ತು ಜೆ.ಡಿ.ಎಸ್ ಹಾಗೂ ಪಕ್ಷೇತರ ಸದಸ್ಯನ ಬೆಂಬಲ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ವಿ.ಪ ಸದಸ್ಯ ಎಸ್.ಎಲ್.ಘೊಟ್ನೇಕರ ಮತ ಸೇರಿ 18 ಮತಗಳನ್ನು ಅಜರ್ ಬಸರಿಕಟ್ಟಿ ಹಾಗೂ ಸುವರ್ಣಾ ಮಾದರ ಪಡೆದರು. ಬಿಜೆಪಿ ಸ್ಪರ್ಧಿಗಳು 7 ಮತಗಳನ್ನು ಪಡೆದರು.
ಅಭಿವೃದ್ಧಿ ನಮ್ಮ ಲಕ್ಷ್ಯವಾಗಿರಲಿ: ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯ ನಂತರ ಪುರಸಭೆಯ ಸದಸ್ಯರಿಗೆ ಸಲಹೆ ನೀಡಿದ ಶಾಸಕ ಆರ್.ವಿ.ದೇಶಪಾಂಡೆ ರಾಜಕೀಯ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಈಗ ಚುನಾವಣೆ ಮುಗಿದಿದ್ದು ಇನ್ನು ನಾವು ಕೇವಲ ಅಭಿವೃದ್ಧಿಗೆ ಚಿಂತಿಸಬೇಕು. ಪಟ್ಟಣದ ಅಭಿವೃದ್ಧಿಯೇ ನಮ್ಮ ಲಕ್ಷ್ಯವಾಗಿರಬೇಕು ಎಂದರು.
ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಿರಸ್ತೆದಾರ್ ಅನಂತ ಚಿಪ್ಪಲಗಟ್ಟಿ, ಕಂದಾಯ ಇಲಾಖೆಯ ಕಿರಣ ಜಕ್ಕಲಿ, ಪುರಸಭೆಯ ರಾಮಚಂದ್ರ ಮೋಹಿತೆ ಸಹಕರಿಸಿದರು. ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಇದ್ದರು. ಪೊ›ಬೇಷನರಿ ಐ.ಪಿ.ಎಸ್ ಕುಶಾಲ ಚೌಕ್ಸಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.